ಚೆನ್ನೈ,ಜೂ.೨೩-ತಮಿಳಿನ ಖ್ಯಾತ ರ್ಯಾಪರ್ ದೇವ್ ಆನಂದ್ ಅಪಹರಣ ಪ್ರಕರಣದ ಐವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ದೇವ್ ಆನಂದ್ ಅವರು ಮನೆಗೆ ಮರಳುತ್ತಿದ್ದಾಗ ೧೦ ಮಂದಿಯ ಗ್ಯಾಂಗ್ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಅಪಹರಣ ಮಾಡಿದ್ದು,ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ದೇವ್ ಆನಂದ್ ರನ್ನು ಪುದುಕ್ಕೊಟ್ಟೈನಲ್ಲಿ ರಕ್ಷಣೆ ಮಾಡಲಾಗಿದ್ದು ಅವರು ಸುರಕ್ಷಿತರಾಗಿದ್ದಾರೆ.
ಮಧುರೈನ ೨೯ ವರ್ಷದ ರ್ಯಾಪರ್ ಕಾರ್ಯಕ್ರಮ ನೀಡಿ ನಂತರ ಕಲ್ಪಾಕ್ಕಂ ಕಡೆಗೆ ಹೋಗುತ್ತಿದ್ದರು. ತನ್ನ ಇಬ್ಬರು ಸ್ನೇಹಿತರನ್ನು ತಿರುವೆರ್ಕಾಡುನಲ್ಲಿ ಡ್ರಾಪ್ ಮಾಡಬೇಕಾಯಿತು. ಮಧ್ಯರಾತ್ರಿಯ ಸುಮಾರಿಗೆ ಕಾರು ಮಧುರವಾಯಲ್ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ.
ದೇವ್ ಆನಂದ್ ಮತ್ತು ಅವರ ಸ್ನೇಹಿತರು ಕಾರಿಗಾದ ಹಾನಿಯನ್ನು ಪರಿಶೀಲಿಸಲು ಇಳಿದರು. ಅದೇ ಸಮಯದಲ್ಲಿ, ಎರಡು ಕಾರುಗಳಲ್ಲಿ ಬಂದ ೧೦ ಮಂದಿಯ ತಂಡವು ದೇವ್ ಆನಂದ್ ಅವರನ್ನು ಚಾಕು ತೋರಿಸಿ ಅಪಹರಿಸಿದರು. ಜೊತೆಯಲ್ಲಿದ್ದ ದೇವ್ ಸ್ನೇಹಿತರಿಗೆ ಬೆದರಿಕೆ ಹಾಕಿ ಅಹಪರಿಸಿದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ತಿರುವೆರ್ಕಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಿದ್ದರು. ಅರೋಪಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಾಪರ್ ದೇವ್ ಕರೆದುಕೊಂಡು ಮಧುರೈಗೆ ಹೋಗುತ್ತಿದ್ದಾರೆ ಎಂಬ ಸುಳಿವಿನ ಆಧಾರದ ಮೇಲೆ, ಪೊಲೀಸರು ತಮ್ಮ ಮಧುರೈ ಕೌಂಟರ್ಪಾರ್ಟ್ಗಳನ್ನು ಎಚ್ಚರಿಸಿ ಅಪಹರಣಕಾರಲ್ಲಿ ೫ ಮಂದಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಅವರನ್ನು ಚೆನ್ನೈಗೆ ಕರೆತರಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆನಂದ್ ಅವರ ಸಹೋದರ ಸಿರಂಜೀವಿ ಅವರು ಚಿಟ್ ಫಂಡ್ ಯೋಜನೆಯಲ್ಲಿ ಮಧುರೈನಲ್ಲಿ ಹಲವಾರು ಜನರಿಂದ ೨.೫ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಆದರೆ ಆ ಹಣವನ್ನು ಹಿಂದಿರುಗಿಸಲು ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ದೇವ್ ಮೋಹನ್ ಅವರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.