ರೌಡಿಗಳಿಗೆ ಚಳಿ ಬಿಡಿಸಿದ ಖಾಕಿ

ನಗರದ ದಕ್ಷಿಣ ವಿಭಾಗದ ಪೊಲೀಸರು ರೌಡಿಗಳ ಮನೆ ಮೇಲೆ ದಾಳಿ ಮಾಡಿ ಸುಮಾರು ೧೭೫ ಕ್ಕೂ ಹೆಚ್ಚು ರೌಡಿಗಳ ಕೇಸುಗಳ ಪಟ್ಟಿಯನ್ನು ತಪಾಸಣೆ ಮಾಡುತ್ತಿರುವುದು.

ಬೆಂಗಳೂರು,ಜೂ.೮-ನಗರದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ಹತ್ತಿಕ್ಕಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ನೂತನ ಪೊಲೀಸ್ ಕಮೀಷನರ್ ದಯಾನಂದ್ ಅವರು ನೀಡಿರುವ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ನಗರದಾದ್ಯಂತ ೧ ಸಾವಿರಕ್ಕೂ ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ಪೂರ್ವ ಪಶ್ಚಿಮ, ದಕ್ಷಿಣ, ಆಗ್ನೇಯ ವಿಭಾಗದ ಸೇರಿದಂತೆ ನಗರದ ವಿವಿಧ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆಯಿಂದ ದಾಳಿ ೧ ಸಾವಿರಕ್ಕೂ ರೌಡಿಗಳು ಅಪರಾಧ ಹಿನ್ನಲೆಯ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕೈಗೊಳ್ಳಲಾಗಿದೆ.ದಾಳಿ ವೇಳೆ ಹಲವರ ಮನೆಗಳಲ್ಲಿ ಮಾರಕಾಸ್ತ್ರಗಳು, ಗಾಂಜಾ ಪತ್ತೆಯಾಗಿದೆ ಅದನ್ನು ಜಪ್ತಿ ಮಾಡಿ ಹಲವರನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಪೂರ್ವ ವಿಭಾಗದ ಪೋಲಿಸರು ಹಲಸೂರು, ಪುಲಕೇಶಿನಗರ, ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮನೆಗಳ ಮೇಲೆ ಡಿಸಿಪಿ ಭೀಮಾಶಂಕರ ಗುಳೇದ್ ನೇತೃತ್ವದಲ್ಲಿ ದಾಳಿ ಮಾಡಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.ಇನ್ನು ಆಗ್ನೇಯ ವಿಭಾಗದ ರೌಡಿಶೀಟರ್‌ಗಳ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಜೈಲು ಸೇರಿ ಬಿಡುಗಡೆಗೊಂಡಿರುವ ರೌಡಿಶೀಟರ್‌ಗಳಿಗೆ ಮತ್ತೆ ಎಚ್ಚರಿಕೆ ಕೊಡುವ ಸಲುವಾಗಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ರೌಡಿ ಆಕ್ಟಿವಿಟಿಗಳಲ್ಲಿ ಭಾಗಿಯಾಗದಂತೆಯೂ ಎಚ್ಚರಿಕೆ ಕೊಡಲಾಗಿದೆ. ಡಿಸಿಪಿ ಸಿಕೆ ಬಾಬ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಕೋರಮಂಗಲ, ಮಡಿವಾಳ, ಆಡುಗೋಡಿ, ಮೈಕೋ ಲೇ ಔಟ್ ಸೇರಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದೆ.

ಗಾಂಜಾ ಪತ್ತೆ:
ದಾಳಿ ವೇಳೆ ಹಲವು ರೌಡಿಶೀಟರ್‌ಗಳ ಮನೆಗಳಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ. ನಗರದ ಎಂಟು ವಿಭಾಗದ ಪೊಲೀಸರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಹಲವಾರು ರೌಡಿಗಳ ನಿವಾಸದಲ್ಲಿ ಮಾರಕಾಸ್ತ್ರಗಳು ಮತ್ತು ಗಾಂಜಾ ಪತ್ತೆಯಾಗಿದೆ. ಎಂಟು ವಿಭಾಗದ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದರು.
ಎಚ್ಚರಿಕೆ ಮುಚ್ಚಳಿಕೆ:
ಚುನಾವಣಾ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ರೌಡಿಗಳನ್ನು ಬಂಧಿಸಲಾಗಿತ್ತು. ಹಲವರನ್ನು ನಗರದಿಂದ ಗಡಿಪಾರು ಮಾಡಲಾಗಿತ್ತು. ಇದೀಗ ಜೈಲಿನಿಂದ ಬಿಡುಗಡೆಗೊಂಡಿರುವ ಹಾಗೂ ಮರಳಿ ಬಂದಿರುವ ರೌಡಿಶೀಟರ್‌ಗಳು ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಎಚ್ಚರಿಕೆ ಕೊಡುವ ಸಲುವಾಗಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಮನೆಯಲ್ಲಿ ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಹಲವರಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.