ಬೆಳಗಾವಿ,ಜೂ.೧೦-ಕೇವಲ ೮ ದಿನಗಳಲ್ಲಿ ಸಪ್ತಪದಿ ತುಳಿಯಬೇಕಿದ್ದ ಕನಸಗೇರಿಯ ಯೋಧ ಸ್ವಗ್ರಾಮಕ್ಕೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.
ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಯೋಧ ಕಾಶಿನಾಥ ಶಿಂಧಿಗಾರ (೨೮) ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕಳೆದ ೮ ವರ್ಷಗಳಿಂದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪಂಜಾಬ್ನಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಲೂಧಿಯಾನ ಬಳಿ ಈ ದುರ್ಘಟನೆ ನಡೆದಿದೆ. ಯೋಧನ ಸಾವಿನಿಂದ ಸ್ವಗ್ರಾಮ ಕನಸಗೇರಿಯಲ್ಲಿ ದುಃಖ ಮಡುಗಟ್ಟಿದೆ. ಇಂದು ಮುಂಜಾನೆ ಸ್ವಗ್ರಾಮ ಕನಸಗೇರಿಗೆ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ಕನಸಗೇರಿಯ ಪ್ರಮುಖ ಬೀದಿಗಳಲ್ಲಿ ಯೋಧನ ಅಂತಿಮ ಯಾತ್ರೆ ನಡೆಯಿತು. ಮದುವೆ ಮಾಡಿಕೊಂಡು ಪತ್ನಿಯ ಜೊತೆಗ ಮೆರವಣಿಗೆ ಮಾಡಿಕೊಳ್ಳಬೇಕಿದ್ದ ಯೋಧನ ಶವ ಮೆರವಣಿಗೆ ಊರಿನ ಬೀದಿಗಳಲ್ಲಿ ನಡೆದದ್ದು ಊರಿನ ಜನತೆಯಲ್ಲಿ ಅಪಾರ ಶೋಕ ಉಂಟುಮಾಡಿದೆ.
ಸೈನ್ಯದ ರೂಢಿಯಂತೆ ಅಂತಿಮ ನಮನಗಳನ್ನು ಸಲ್ಲಿಸಿದ ಬಳಿಕ ಬಂಧುಗಳಿಗೆ ಶವವನ್ನು ಒಪ್ಪಿಸಲಾಗಿದ್ದು, ಸಮುದಾಯದ ಸಂಪ್ರದಾಯದಂತೆ ಕುಟುಂಬದ ಜಮೀನಿನಲ್ಲಿ ಅಂತಿಮ ವಿಧಿವಿಧಾನಗಳು ಹಾಗೂ ಶವಸಂಸ್ಕಾರ ನಡೆಯಿತು.