
ದಾವಣಗೆರೆ.ಮಾ.೧೮: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ – ನ್ಯಾಮತಿ ಕ್ಷೇತ್ರದಿಂದ ಎಂ. ಪಿ. ರೇಣುಕಾಚಾರ್ಯ ಅವರನ್ನು 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದರೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ರೇಣುಕಾಚಾರ್ಯರಿಗೆ ಈ ಬಾರಿಯ ಆಶೀರ್ವದಿಸಿ ಎಂದು ಹೇಳುವ ಮೂಲಕ ಟಿಕೆಟ್ ಅವರಿಗೆ ನೀಡುವುದು ಎಂಬ ಸಂದೇಶ ರವಾನಿಸಿದರು.ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಇಲ್ಲಿನ ಜನಸ್ತೋಮ ನೋಡಿದಾಗ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರೇಣುಕಾಚಾರ್ಯ ಗೆಲ್ಲುವುದು ಅಷ್ಟೇ ಸತ್ಯ ಎಂದರು.20 ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆದ್ದೇ ಗೆಲ್ತಾರೆ ಎಂಬುದಕ್ಕೆ ನೀವೇ ಸಾಕ್ಷಿ. ದೊಡ್ಡ ಪ್ರಮಾಣದಲ್ಲಿ ಸೇರಿದ್ದೀರಾ. 50 ಸಭೆಗಳನ್ನು ಮಾಡಿ ಬಂದಿದ್ದೇನೆ. ಒಂದೂವರೆ ಎರಡು ಗಂಟೆ ತಡವಾದರೂ ಇಷ್ಟು ಜನರು ಸೇರಿರುವುದು ರೇಣುಕಾಚಾರ್ಯರ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಹೊನ್ನಾಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ರಾತ್ರಿಯಾದ್ಯಂತ ಓಡಾಡಿ ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಅಭಿಮಾನ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಾ. ನೀವು ಮನೆ ಮನೆಗೆ ಹೋಗಿ ವಿಚಾರಿಸಿ. ನಮ್ಮ ಸರ್ಕಾರ, ಬೊಮ್ಮಾಯಿ ಸರ್ಕಾರ ಒಂದಲ್ಲಾ ಒಂದು ಸೌಲಭ್ಯ ಕೊಟ್ಟಿದೆ. ರೇಣುಕಾಸ್ವಾಮಿಯನ್ನು 20 ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ದಾಖಲೆ ಪ್ರಮಾಣದಲ್ಲಿ ಸೇವೆ ಮಾಡಿರುವುದು ಹೊನ್ನಾಳಿಯ ಹುಲಿ ರೇಣುಕಾಚಾರ್ಯ. ಇಷ್ಟೊಂದು ಅನುದಾನ ತರಲು ಸಾಧ್ಯವಾಗಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇರುವುದರಿಂದ ಸಾಧ್ಯವಾಯ್ತು. 1900 ಕೋಟಿ ರೂಪಾಯಿಗೂ ಅಧಿಕ ಹಣ ತರುವುದು ಸುಲಭದ ಕೆಲಸವಲ್ಲ ಎಂದರು.ಒಂದೊಂದು ಹಳ್ಳಿಗೆ ಹತ್ತು ಬಾರಿ ಬಂದಿರುವ ರೇಣುಕಾಚಾರ್ಯ, ಜನರಿಗೆ ಬೇಸರವಾಗುತ್ತೆ. ಅಷ್ಟು ಸಲ ಹೋಗಬೇಡಿ ಅಂದ್ರೂ ಕೇಳಲಿಲ್ಲ. ಅದೇ ಅವನ ಜೀವನ, ಬದುಕು. ಜನಪ್ರಿಯ ಶಾಸಕರಿದ್ದರೂ ಜನೋಪಯೋಗಿ ಶಾಸಕರುಕಡಿಮೆ ಇದ್ದಾರೆ. ಜನಪ್ರಿಯತೆಗಿಂತ ಜನೋಪಯೋಗಿ ಶಾಸಕರು. ರೇಣುಕಾಚಾರ್ಯರಿಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು