
ಬಳ್ಳಾರಿ,ಮಾ.3: ವಿಜ್ಞಾನ ಎನ್ನುವುದು ಬರಿ ಓದಾಗಬಾರದು, ಸಂಶೋಧನೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಹಾಗೂ ವಿಜ್ಞಾನ ಬೆಳವಣಿಗೆಗೆ ಪೂರಕವಾಗಬೇಕು ಎಂದು ಜಿಲ್ಲಾ ಪಂಚಾಯತ್ನ ಎನ್ಐಸಿಯ ತಾಂತ್ರಿಕ ನಿರ್ದೇಶಕರಾದ ಶಿವಪ್ರಕಾಶ್ ವಸ್ತ್ರದ್ ಅವರು ಹೇಳಿದರು.
ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತಕ ಸಾಲಿನಲ್ಲಿ ನಮ್ಮ ದೇಶವು ಜಿ-20ಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸಂದರ್ಭದಲ್ಲಿ “ಜಾಗತಿಕ ಸೌಖ್ಯಕ್ಕಾಗಿ ಜಾಗತಿಕ ವಿಜ್ಞಾನ” ಎಂಬ ಧ್ಯೇಯವಾಕ್ಯದ ಪ್ರಸ್ತುತತೆಯನ್ನು ಹೊಂದಿದೆ ಎಂದರು.
ಆಧುನಿಕ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡಲ್ಲಿ ಮಾತ್ರ ನಮ್ಮ ದೇಶ ಮತ್ತು ಪ್ರಪಂಚದ ಮನುಕುಲ ಉಪಯೋಗ ಪಡೆದುಕೊಳ್ಳುತ್ತದೆ. ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಧುನಿಕ ತಂತ್ರಜ್ಞಾನವನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವರಣೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಸಿ.ನಾಗಭೂಷಣ್ ಅವರು ಮಾತನಾಡಿ, ಸಿವಿ ರಾಮನ್ ಅವರು ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ಹಾಗೂ ಅವರು ಟಾಟಾ ಇನ್ಸಿಟ್ಯೂಟ್ ಅನ್ನು ಹೇಗೆ ಕಟ್ಟಿ ಬೆಳಸುವುದರಲ್ಲಿ ಅವರ ಪಾತ್ರ ಎಷ್ಟು ದೊಡ್ಡದು ಎನ್ನುವುದರ ಬಗ್ಗೆ ತಿಳಿಸಿ, ರಾಮನ್ ಎಫೆಕ್ಟ್ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲೆಯ ನಿರ್ದೇಶಕರಾದ ಪ್ರಿಯ ಕೃಷ್ಣನ್.ಪಿ, ಜಿಲ್ಲಾ ಪಂಚಾಯತ್ನ ಯೋಜನಾ ಸಂಯೋಜಕರಾದ ರಾಮಚಂದ್ರರೆಡ್ಡಿ ಸೇರಿದಂತೆ ಶಿಕ್ಷಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.