ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಕೋಲಾರ, ಸೆ.೧೨- ದೇಶದ ರಕ್ಷಣೆಗೆ ಸೈನಿಕರು ಹಾಗೆಯೇ ಅರಣ್ಯ,ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಪಾತ್ರ ಅಮೂಲ್ಯವಾಗಿದ್ದು, ತಮ್ಮ ಪ್ರಾಣದ ಹಂಗನ್ನು ತೊರೆದು ಅವರು ನಿರ್ಭೀತಿಯಿಂದ ಕಾರ್ಯನಿರ್ವಹಿಸುತ್ತಾರೆಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಶುಕ್ಲಾಕ್ಷ ಪಾಲನ್ ಅವರು ಹೇಳಿದರು.
ಕೋಲಾರ ಅರಣ್ಯ ವಿಭಾಗ ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಚ ತ್ಯಾಗವನ್ನು ಮಾಡಿದಂತಹ ಸಮರ್ಪಣ ಮನೋಭಾವದ ಹಲವಾರು ಅರಣ್ಯ ಸಿಬ್ಬಂದಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿ ರಾರಾಜಿಸುತ್ತಿವೆ. ಇವರ ಪ್ರಯತ್ನಗಳು, ಧೈರ್ಯ ಶೀಲ ಕಾರ್ಯಗಳು ಮತ್ತು ಸರ್ವಚಿತ್ರಗಳು ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ಅವರ ಪ್ರಾಣಗಳನ್ನೇ ಮುಡಿಪಾಗಿಟ್ಟಿದ್ದಾರೆ.
ಸೆಪ್ಟೆಂಬರ್ ೧೧ರಂದು ಜೋಧಪುರನ್ ಮಹಾರಾಜ ಅಭಯ್ ಸಿಂಗ್ ನ ಹೊಸ ಅರಮನೆ ನಿರ್ಮಾಣಕ್ಕೆ ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಈ ಸಮುದಾಯದ ೩೬೩ ಪುರುಷರ ಮಹಿಳೆ ಮತ್ತು ಮಕ್ಕಳನ್ನು ಸೇರಿದಂತೆ ಮುಗ್ಧ ಪರಿಸರ ಪ್ರೇಮಿಗಳನ್ನು ಸೈನಿಕರಿಂದ ಹತ್ಯೆಗೈಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿಯಾದ ಬಿಷ್ಣೋಯಿ ಜನಾಂಗದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅರಣ್ಯ ನಾಶವಾಗುತ್ತಿದ್ದು, ಅದರ ಪರಿಣಾಮ ಹವಾಮಾನ ವೈಪರಿತ್ಯದಿಂದ ಮಳೆ ಕಡಿಮೆಯಾಗುತ್ತಿದೆ. ಅದರಿಂದ ಮಾನವನ ಆರೋಗ್ಯದ ಮೇಲೆ ಬಹು ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ: ರಾಜಕುಮಾರ್ ಅವರ ಗಂಧದ ಗುಡಿ ಸಿನಿಮಾವನ್ನು ನೆನಪಿಸಿಕೊಂಡು ಅವರ ಸಿನಿಮಾವೇ ನನಗೆ ಅರಣ್ಯವನ್ನು ಉಳಿಸಲು ಹಾಗೇ ಆ ಸಿನಿಮಾವೇ ನನಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ಮೊದಲನೇ ದರ್ಜೆಯ ಜೆ ಎಂ ಎಫ್ ಸಿ, ನ್ಯಾಯಾಲಯದ ನ್ಯಾಯಾಧೀಶರು ಶ್ರೀನಿವಾಸ್ ಎಸ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ, ಪದ್ಮ ಬಸಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ ನಾರಾಯಣ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿ ಏಡುಕೊಂಡಲು, ಮತ್ತು ಅರಣ್ಯ ಸಿಬ್ಬಂದಿ ಮತ್ತಿತರರು ಸೇರಿದಂತೆ ಉಪಸ್ಥಿತರಿದ್ದರು.