‘ರಾಮನ ಅವತಾರ’ ಎತ್ತಿದ ರಿಷಿ, ಪ್ರಣೀತ ಸಾಥ್

ವಿಭಿನ್ನ ಹಾಗೂ ಹೊಸತನ ಸಿನಿಮಾಗಳ ಮೂಲಕ ಚಿತ್ರ ಪ್ರೇಮಿಗಳನ್ನು ರಂಜಿಸುತ್ತಿರುವ ಪ್ರತಿಭಾನ್ವಿತ ನಟ ರಿಷಿ ಇದೀಗ ರಾಮನ ಅವತಾರ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ,ಇದಕ್ಕೆ ನಟಿ ಪ್ರಣೀತಾ ಸುಭಾಷ್ ಸಾಥ್ ನೀಡಿದ್ದಾರೆ.

ರಾಮನ ಅವತಾರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸದ್ಯ ಸೆನ್ಸಾರ್ ಅಂಗಳಕ್ಕೆ ಹೊರಡಲು ಸಜ್ಜಾಗಿದೆ.

ಇತ್ತೀಚೆಗೆಷ್ಟೇ ರಾಮ ಈಸ್ ಜೆಂಟಲ್ ಮೆನ್ ಅಂತಾ ಹೆಜ್ಜೆ ಹಾಕಿದ್ದ ರಿಷಿ, ಇದಿಘ ಮನಸ್ಸು ಬೇರೆಯ ದಿಕ್ಕಿಗೆ ಸಾಗಲು ಎಂದು ಗುನುಗುತ್ತಿದ್ದಾರೆ. ರಾಮನ ಅವತಾರ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.  ಸಿಂಪಲ್ ಸುನಿ ಸಾಹಿತ್ಯದ ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದಾರೆ.  ಉಡುಪಿ ಬೀಚ್ ನಲ್ಲಿ ಇಡೀ ಹಾಡನ್ನು ಚಿತ್ರೀಕರಿಸಲಾಗಿದೆ. ಸೊಗಸಾದ ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ ಜೋಡಿ ನೋಡುಗರ ಗಮನಸೆಳೆಯುತ್ತಿದೆ.

ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ.

ಎಲ್ಲದಕ್ಕೂ ಸೈ

ಕಾಮಿಡಿ, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಯಾವುದೇ ಇರಲಿ ಅದಕ್ಕೆ ರಿಷಿ ಸರಿಹೊಂದುತ್ತಾರೆ. ಬರೀ ಸಿನಿಮಾ ಮಾತ್ರವಲ್ಲ ವೆಬ್ ಸೀರಿಸ್ ಮೂಲಕವೂ  ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ ಕನ್ನಡ ಪ್ರತಿಭಾನ್ವಿತ ನಟ ರಿಷಿ.

ತೆಲುಗಿನ  ನಿರ್ದೇಶಕ  ಮಹಿ ರಾಘವ್ ಆಕ್ಷನ್ ಕಟ್ ಹೇಳಿರುವ ಕ್ರೈಮ್ ಡ್ರಾಮಾ ‘ಶೈತಾನ್’ನಲ್ಲಿ ರಿಷಿ ರಗಡ್ ಆಗಿ ಮಾಸ್ ಅವತಾರದಲ್ಲಿ  ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಈಗ ರಾಮನ ಅವತಾರ ಸಿನಿಮಾ ಮೂಲಕ ಲವರ್ ಬಾಯ್ ಆಗಿ ಪ್ರತ್ಯಕ್ಷರಾಗಿದ್ದಾರೆ.