ಬೀದರ:ಎ.9:ಶರಣರ ಕಣ್ಮಣಿ, ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸಬೇಕೆಂದು ಬೇಮಳಖೇಡ ಬೀದರ ಗೋರಟಾದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು. ಅವರು ನೌಬಾದ ಭಾಲ್ಕಿ ರಸ್ತೆಯಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ನಡೆದ ಮಹಾಶಿವಶರಣೆ ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿ ಜಯಂತಿ ಮಹೋತ್ಸವ ಮತ್ತು ನೌಬಾದಿನ ಸಿದ್ಧೇಶ್ವರ ನಗರದಲ್ಲಿಯ ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಅಕ್ಕಮಹಾದೇವಿ ನೂತನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿದರು.
ಭಕ್ತಿ ಜ್ಞಾನ ಮತ್ತು ವೈರಾಗ್ಯಗಳ ತ್ರಿವೇಣಿ ಸಂಗಮ ವೆನಿಸಿರುವ ಶ್ರೀ ಅಕ್ಕಮಹಾದೇವಿಯು ಜಾಗತಿಕ ಮಹಿಳೆಯರ ಸ್ವಾಭಿಮಾನದ ಸಂಕೇತಳಾಗಿರುವರು. ಪುರುಷ ಸಮಾಜದ ಆಧೋಮುಖಿ ನಡೆತೆಯನ್ನು ಖಂಡಿಸಿ ಧಿಕ್ಕರಿಸಿ ಸಾವಿಲ್ಲದ ರೋಹಿಲ್ಲದ ಜಗದೊಡೆಯ ಚನ್ನಮಲ್ಲಿಕಾರ್ಜುನನ್ನೇ ತನ್ನೊಡೆಯನನ್ನಾಗಿ ಸ್ವೀಕರಿಸಿ ಅವನನ್ನು ಪಡೆದ ಅಕ್ಕ ನಾರಿಶಕ್ತಿ ಎಂಥದೆನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಧೀರ ಮಹಿಳೆ.
ಅಷ್ಟೇ ಅಲ್ಲ ಜ್ಞಾನದ ಖಣಿಯಾಗಿರುವ ಅಕ್ಕ ಕನ್ನಡದ ಪ್ರ-ಪ್ರಥಮ ಕವಿಯಿತ್ರಿಯಾಗಿರುವಳು. ಜಗತ್ತು ಇಷ್ಟೊಂದು ಪ್ರಗತಿ ಸಾಧಿಸಿದರೂ ಕೂಡ ಮಹಿಳೆಯರ ಮೇಲಿನ ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆಗಳೂ ಕಮ್ಮಿಯಾಗಿಲ್ಲ. ಈ ಕೆಟ್ಟ ಸಂಸ್ಕøತಿ ತೊಲಹಬೇಕು. ಹೆಣ್ಣು ಅಬಲೆಯಲ್ಲ! ಸಬಲೆಯಾಗಿರುವಳು. ಮಹಿಳಾ ಕುಲಕ್ಕೆ ಅಕ್ಕ ಶಕ್ತಿಸ್ವರೂಪಿಣಿಯಾಗಿರುವಳು. ಅಕ್ಕ ಎಲ್ಲ ಮಹಿಳೆಯರಿಗೆ ಸ್ವಾಭಿಮಾನದ ಸಂಕೇತವಾಗಿದ್ದು ಎಲ್ಲರೂ ಮಹಿಳೆಯರನ್ನು ಗೌರವದಿಂದ ಕಾಣಬೇಕೆಂದು ಶ್ರೀಗಳು ಹೇಳಿದರು.
ನಗರಸಭೆ ಸದಸ್ಯೆ ಶ್ರೀಮತಿ ಮಹಾದೇವಿ ಹುಮನಾಬಾದೆ, ಸಮಾರಂಭವನ್ನು ಉದ್ಘಾಟಿಸಿದರು, ನ್ಯಾಯವಾದಿಗಳಾದ ಕೆ.ಎಚ್. ಪಾಟೀಲ, ಬಸವ ಪ್ರಕಾಶ, ಕೆ. ಭದ್ರಶೆಟ್ಟಿ ಮತ್ತು ಸರಸ್ವತಿಬಾಯಿ ಗೌರಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು. ವೀರೆಶ ಘಾಳೆಪ್ಪ ಹೆಗ್ಗೆ, ದಾಸೋಹ ಸೇವೆಯನ್ನು ಮಾಡಿದರು. ಧನ್ನೂರು ಗಂಗಾದರ ಸ್ವಾಮಿ ಪೂಜೆಯನ್ನು ನೇರವರಿಸಿದರು. ಮಹಾದೇವಪ್ಪಾ ಭಂಗೂರೆ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಅಕ್ಕನ ಬಳಗದವರು ಅಕ್ಕಳ ತೊಟ್ಟಿಲ ಕಾರ್ಯಕ್ರಮವನ್ನು ನಡೆಸಿದರು.
ಅಕ್ಕಮಹಾದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಪ್ರತಿ:-
ಅಕ್ಕಳ ಜಯಂತಿ ಅಂಗವಾಗಿ ನೌಬಾದಿನ ಸಿದ್ಧೇಶ್ವರ ನಗರದಲ್ಲಿ ಶ್ರೀ ಅಕ್ಕನ ಬಳಗದ ವತಿಯಿಂದ ವೈರಾಗ್ಯ ನಿಧಿ ಶ್ರೀ ಅಕ್ಕ ಮಹಾದೇವಿಯ ನೂತನ ಮೂರ್ತಿಯನ್ನು ಪ್ರತಿಷ್ಠಾಪನೆ ಸಮಾರಂಭ ಅದೂರಿಯಾಗಿ ನಡೆಯಿತ್ತು. ಅಕ್ಕನ ಬಳಗದ ಅಧ್ಯಕ್ಷರಾದ ಶಾಂತಮ್ಮಾ ಟೀಚರ ಅವರ ಮುಂದಾಳತ್ವದಲ್ಲಿ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ನಡೆಯಿತು. ಶ್ರೀ ಹನುಮಾನ ಮಂದಿರದಿಂದ ಅಕ್ಕಮಹಾದೇವಿ ನೂತನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಅಕ್ಕನ ಬಳಗದ ಪ್ರಮುಖರಾದ ಶಾಂತಮ್ಮಾ ಟೀಚರ್, ಲಲಿತಾ ಕುಣಿಕೆರಿ, ಲೀಲಾವತಿ ಬಿರಾದಾರ, ಭಾರತಿ ಸಂಗೊಳಗಿ, ಅನಿತಾ ಕಣಜಿ, ವಿಜಯಲಕ್ಷ್ಮೀ ಮೊರಖಂಡಿ, ಶಶಿಕಲಾ ಬಿರಾದಾರ, ಶಿವರಾಜ ಮೊರಖಂಡಿ, ಬಾಬುರಾವ ಚಾಂಬಾಳ ನಾಗನಾಥ ಸ್ವಾಮಿ, ಶಿವರಾಜ ನೇಳಗೆ ವಿಜಯಕುಮಾರ ಸುತಾರ, ರಾಜಕುಮಾರ ಸಜ್ಜನಶೆಟ್ಟಿ ಬುಧೇರಾ, ಜಗನ್ನಾಥ ಮುಗಡಂಪಳಿ ಬುಧೇರಾ, ಕುಪೇಂದ್ರ ಗೌಡರು, ಕಂಟೆಪ್ಪಾ ಭಂಗೊರೆ, ಮಹಾಂತೇಶ ಡೊಂಗರಗಿ, ಕಾಶಿನಾಥ ನೌಬಾದೆ ಮುಂತಾದ ಗಣ್ಯರು ಇದ್ದರು.