ರಾಜ್ಯದಲ್ಲಿ ಶಿಕ್ಷಕರಿಗೆ ಅತಿ ಎತ್ತರದ ಗೌರವ ಡಾ. ಕಂಬಾರ

ಬೆಂಗಳೂರು,ಸೆ, ೨೩; ಭಾರತೀಯ ಸಂಸ್ಕೃತಿಕ ಬೇರುಗಳು ಎಲ್ಲಿ ಹರಡಿಕೊಂಡಿವೆಯೋ ಅಲ್ಲಿ ಮಾತ್ರ ಶಿಕ್ಷಕರಿಗೆ ಮಹೋನ್ನತ ಗೌರವ ದೊರೆಯುತ್ತದೆ. ನಮ್ಮಲ್ಲಿ ಅಕ್ಷರ ಕಲಿಸುವವರಿಗೆ ಬಹು ಎತ್ತರದ ಸ್ಥಾನ ದೊರೆಯುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ದಕ್ಷಿಣ ವಲಯ ೧ ಮತ್ತು ೨ ರ ಅನದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕ ಸ್ನೇಹಿತ, ಗುರು, ಮಾರ್ಗದರ್ಶಕ ಎಲ್ಲವೂ ಆಗಿದ್ದಾನೆ. ಬೇರೆ ದೇಶಗಳಲ್ಲಿ ಶಿಕ್ಷಕರದ್ದು ವೇತನ ಪಡೆಯುವ ಒಂದು ವೃತ್ತಿ ಮಾತ್ರ. ನಮ್ಮಲ್ಲಿ ಗುರುವಿನ ದರ್ಶನವಾದರೆ ಪಾವನ ಎಂಬ ಮನಸ್ಥಿತಿ ಇದೆ. ಇದು ನಮ್ಮ ದೇಶದ ಅತಿ ದೊಡ್ಡ ಸೌಭಾಗ್ಯ ಎಂದರು.
ವಿಧಾನಪರಿಷತ್ತಿನ ಮಾಜಿ ಉಪಸಭಾಪತಿ ಪುಟ್ಟಣ್ಣ ಮಾತನಾಡಿ, ಸರ್ಕಾರಿ ಶಿಕ್ಷಕರಿಗೆ ನೀಡುವ ಶಿಕ್ಷಕರ ಪ್ರಶಸ್ತಿ ಮುಂದಿನ ವರ್ಷದಿಂದ ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೂ ದೊರೆಯಲಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಜಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಬಿ. ಕೆಂಚಪ್ಪ ಗೌಡ, ಕಾರ್ಯದರ್ಶಿ ವೆಂಕಟರಾಮೇಗೌಡ, ಕ್ರೆಡೋ ಅರ್ಲಿ ಚೈಲ್ಡ್ ವುಡ್ ಸಲೂಷನ್ಸ್ ನ ಸಹ ಸಂಸ್ಥಾಪಕರಾದ ಮೃದುಲ ಶ್ರೀಧರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆ.ಬಿ. ನಿಂಗರಾಜಪ್ಪ, ಶಿಕ್ಷಣಾಧಿಕಾರಿಗಳಾದ ಎನ್. ವೆಂಕಟೇಶ್, ಎಲ್.ಎಚ್. ಮುತ್ತಯ್ಯ, ಸಿ.ಡಿ. ಜಯಲಕ್ಷ್ಮಿ, ಎಚ್.ಎನ್. ಗಿರಿಜಮ್ಮ ಹಾಗೂ ನಗೆ ಯೋಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ ರಂಗಲಕ್ಷ್ಮಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.