
ಅಥಣಿ :ಮಾ.15: ತಾಲೂಕಿನ ಬನ್ನೂರು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ನಾನು ಸುಮಾರು 24 ಲಕ್ಷ ರೂ ಖರ್ಚು ಮಾಡಿ ಎರಡು ಎಕರೆ ಜಾಗ ಖರೀದಿಸಿ ಸರಕಾರಿ ಹೈಸ್ಕೂಲಿಗೆ ದಾನ ಮಾಡಲಾಗಿದ್ದು, ಇಂದು ಆ ಜಾಗೆಯಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದ ಅಥಣಿ ಮುಖ್ಯ ರಸ್ತೆಯಿಂದ ಖೋತನಟ್ಟಿಗೆ ಹೋಗುವ ರಸ್ತೆ ನಿರ್ಮಾಣ, ಬನ್ನೂರ ಗ್ರಾಮದಲ್ಲಿ 17 ಲಕ್ಷ 75 ಸಾವಿರ ರೂ ವೆಚ್ಚದ ಸರ್ಕಾರಿ ಪ್ರೌಢಶಾಲೆಯ 1 ಶಾಲಾ ಕೊಠಡಿ ಕಾಮಗಾರಿ ಭೂಮಿ ಪೂಜೆ, ತೆಲಸಂಗ ಗ್ರಾಮದಲ್ಲಿ 5 ಲಕ್ಷ ರೂ ವೆಚ್ಚದ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ, 5 ಲಕ್ಷ ರೂ ವೆಚ್ಚದ ಹಾಜಿ ಮಸ್ತಾನ್ ದರ್ಗಾ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ, 5 ಲಕ್ಷ ರೂ ವೆಚ್ಚದ ಹೊರಟ್ಟಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ, 5 ಲಕ್ಷ ರೂ ವೆಚ್ಚದ ಎಸ್.ಆರ್. ಪಾಟೀಲ್ ಅವರ ಹೊಲದ ಹತ್ತಿರ ಚಕ್ ಡ್ಯಾಮ್ ನಿರ್ಮಾಣ, 1ಕೋಟಿ 35 ಲಕ್ಷ ರೂ ವೆಚ್ಚದ ತೆಲಸಂಗ ಗ್ರಾಮದಲ್ಲಿ ಸೇತುವೆ ಸಹಿತ ಬಾಂಧಾರ ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಅರಟಾಳ ಗ್ರಾಮದಲ್ಲಿ 14 ಲಕ್ಷ ರೂ ವೆಚ್ಚದಲ್ಲಿ ಘಾಟಗೆ ತೋಟದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರಕ್ಕೆ ಈಗಾಗಲೇ ದಾಖಲೆ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ, ಅಭಿವೃದ್ಧಿ ಮಂತ್ರವೊಂದನ್ನು ಬಿಟ್ಟು ಇನ್ಯಾವುದೇ ಕೆಲಸಕ್ಕೆ ನನ್ನ ಹತ್ತಿರ ಸಮಯವಿಲ್ಲ ರಾಜ್ಯದಲ್ಲಿಯೇ ಅಥಣಿ ಕ್ಷೇತ್ರವನ್ನು ಮಾದುಯಾಗಿಸುವ ಗುರಿ ನನ್ನದು. ಪುಟ್ಟ ಮಗುವಿನಿಂದ ವೃದ್ಧರವರೆಗೂ ನೇರವಾಗಿ ನನ್ನನ್ನು ಸಂಪರ್ಕಿಸಿದಾಗ ಅವರ ಸಮಸ್ಯೆಗಳಿಗೆ ಸಂದಿಸಿ ಪರಿಹರಿಸಿದ ತೃಪ್ತಿ ನನಗಿದೆ.
ಅಥಣಿ ಮತಕ್ಷೇತಕ್ಕೆ ಈಗಾಗಲೇ ನಾನು ಹಾಗೂ ವಿ.ಪ ಸದಸ್ಯ ಲಕ್ಷ್ಮಣ ಸವದಿ ಅವರು ಸಾಕಷ್ಟು ಅನುದಾನ ತಂದು ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೆವೆ, ನಮ್ಮಲ್ಲಿ ಟಿಕೇಟ್ ವಿಷಯವಾಗಿ ಯಾವುದೇ ರೀತಿಯಾದ ಬಿನ್ನಾಭಿಪ್ರಾಯವಿಲ್ಲ, ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು, ಹೈಕಮಾಂಡ್ ನಿರ್ಣಯಕ್ಕೆ ನಾವಿಬ್ಬರು ಬದ್ದರಾಗಿದ್ದೇವೆ, ಪಕ್ಷ ಇಬ್ಬರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಎಂದರು.
ಈ ವೇಳೆ ಗುತ್ತಿಗೆದಾರರಾದ ಎಸ್ ಬಿ ನ್ಯಾಮಗೌಡರ, ಪಿ ಎಮ್ ಜಂಬಗಿ, ಎಸ್ ಬಿ ಬೆವನೂರ, ಬಾಹುಸಾಹೇಬ ಜಾಧವ, ನಾನಾಸಾಹೇಬ ಜಾಧವ ಹಾಗೂ ಮುಖಂಡರಾದ ನಿಂಗಪ್ಪ ನಂದೇಶ್ವರ, ಅಪ್ಪಾಸಾಬ ಮಗದುಮ್, ಅಭಿಜಿತ ಕೊಡಗ, ಸಿದ್ದರಾಯ ನಾಯಿಕ, ಬಾಳು ಮಗದುಮ್, ಉಲ್ಲಾಸ ಕವಿಕಾರ, ಅಧಿಕಾರಿಗಳಾದ ವೀರಣ್ಣ ವಾಲಿ, ಎಸ್ ಜೆ ಲಾಂಡಗೆ, ಭರತೇಶ ಮಹಿಷವಾಡಗಿ, ಮುರುಗೇಶ ಬಮನಾಳೆ ಸೇರಿದಂತೆ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.