
ಬೀದರ, ಮೇ 19 : ದಾಂಪತ್ಯದಲ್ಲಿ ಪ್ರೀತಿಯೊಂದಿದ್ದರೆ ಸಾಲದು. ಪರಸ್ಪರ ಗೌರವವೂ ಇರಬೇಕು. ಯಾವಾಗ ನಾನು ಗಂಡು ನಾನೇ ಮೇಲು. ನಾನು ಹೇಳಿದಂತೆಯೇ ನಡೆಯಬೇಕು ಅಥವಾ ನಾನು ಹೆಣ್ಣು ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಬಂದು ಬಿಟ್ಟರಂದೂ ಆ ದಾಂಪತ್ಯ ಹಾಳುಗುವುದರಲ್ಲಿ ಎರಡು ಮಾತಿಲ್ಲ. ಇಬ್ಬರ ಇಷ್ಟ, ಕಷ್ಟಗಳೇನೇ ಇರಲಿ ಅದನ್ನು ಪರಸ್ಪರ ಪ್ರೀತಿಯಿಂದ ನಯವಾಗಿ ಹೇಳಿ ಸರಿಪಡಿಸಿಕೊಂಡು ಬಿಡಿ.
ಇಬ್ಬರು ಪರಸ್ಪರ ಅರ್ಥಮಾಡಿಕೊಂಡು, ಗೌರವ ನೀಡುತ್ತಾ ಬದುಕುವುದೇ ಜೀವನ. ಬದಲಾದ ಕಾಲಘಟ್ಟದಲ್ಲಿ ದಂಪತಿಗಳಿಬ್ಬರು ಚಿಕ್ಕ-ಪುಟ್ಟ ವಿಚಾರಗಳಿಗೆ ಪೆÇೀಲಿಸ್ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವ ಬದಲಾಗಿ ಮನೆಯ ಹಿರಿಯರ ಮಾತನ್ನು ಕೇಳಿ ನೆಮ್ಮದಿಯಿಂದ ಬದುಕಬೇಕು ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ರಾಜೀ ಸಂಧಾನದ ಮೂಲಕ ಒಂದಾದ ದಂಪತಿಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಸಾಗಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಎಸ್.ಕೆ. ಕನಕಟ್ಟೆ ಅವರು ದಂಪತಿಗಳಿಗೆ ಸಲಹೆ ನೀಡಿದರು.
ಬೀದರ ತಾಲೂಕಿನ ವಿಜಯಕುಮಾರ ತಂದೆ ವಿಠಲರಾವ ಇವರು 2013ರಲ್ಲಿ ಕಾವೇರಿ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಮತ್ತು ಮದುವೆಯ ನಂತರ ಕೆಲವು ವರ್ಷಗಳ ಕಾಲ ವೈವಾಹಿಕ ಬದುಕು ಸುಂದರವಾಗಿಯೇ ಇತ್ತು ಆದರೆ ತನ್ನ ಗಂಡನಿಗೆ ತಮ್ಮ ಸಂಸಾರಸಾಗಿಸಲು ಹಣ ಸಂಪಾದನೆ ಮಾಡು ಎಂದರೆ ಕುಡಿದು ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಕಾವೇರಿ ತನ್ನ ಗಂಡನನ್ನು ಬಿಟ್ಟು ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಮಂಡಳ ಸಾಂತ್ವಾನ ಕೇಂದ್ರದಲ್ಲಿರುತ್ತಾರೆ.
ನಂತರ ಹೆಂಡತಿಯು ಸಾಂತ್ವಾನ ಕೇಂದ್ರದ ಮುಖಾಂತರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ, ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ. ಕನಕಟ್ಟೆ ಅವರು ನೋಟಿಸ್ ಜಾರಿ ಮಾಡಿ ಸದರಿ ದಂಪತಿಗಳನ್ನು ಪ್ರಾಧಿಕಾರಕ್ಕೆ ಕರೆಯಸಿ ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ, ಗಂಡನಿಗೆ ಬುದ್ಧಿ ಮಾತು ಹೇಳಿ ಮಕ್ಕಳ ಹಿತ ದೃಷ್ಟಿಯಿಂದ ಒಂದಾಗುವುದು ಅತಿ ಮುಖ್ಯವಾಗಿರುತ್ತದೆ ಮತ್ತು ಕಾನೂನಾತ್ಮಕ ವಿಚಾರಗಳನ್ನು ತಿಳಿಸಿ ಮನಪರಿವರ್ತನೆಗೊಳಿಸಿ ದಿನಾಂಕ 18.05.2023 ರಂದು ದಂಪತಿಗಳಿಬ್ಬರನ್ನು ರಾಜೀ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿ ದಂಪತಿಗಳನ್ನು ಒಂದು ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಸದರಿ ದಂಪತಿಗಳ ಹತ್ತಕ್ಕೂ ಅಧಿಕ ಸಂಬಂಧಿಕರು ಹಾಗೂ ಸಾಂತ್ವಾನ ಕೇಂದ್ರ ಸಿಬ್ಬಂದಿಗಳಾದ ಗೀತಾ, ಸವೀತಾ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳಾದ ಶಂಕ್ರಪ್ಪ ಜನಕಟ್ಟೆ, ಜಗದೀಶ್ವರ ದೊರೆ, ಆಕಾಶ ಸಜ್ಜನ, ಜೀವನ ಸೇರಿದಂತೆ ಮತ್ತಿತರರು ರಾಜೀ ಸಂಧಾನದ ಮೂಲಕ ಒಂದಾದ ದಂಪತಿಗಳಿಗೆ ಶುಭಕೋರಿದರು.