
ಬೆಂಗಳೂರು, ಮಾ.೨೩- ರಾಜರಾಜೇಶ್ವರಿ ನಗರದ ಹೊಸಕೆರೆಹಳ್ಳಿ ಕೆರೆಯ ಮೇಲೆ ಬಿಬಿಎಂಪಿ ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ವಿವಾದ ಕುರಿತು ಸ್ಪಷ್ಟನೆ ನೀಡಿರುವ ಪಾಲಿಕೆ ಅಧಿಕಾರಿಗಳು, ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಕೆರೆಯ ಪುನಶ್ಚೇತನ ಯೋಜನೆ ನಡೆಯುತ್ತಿದೆ ಎಂದಿದ್ದಾರೆ.
ನಗರದಲ್ಲಿಂದು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ವಿಶೇಷ ಆಯುಕ್ತ ರವಿಂದ್ರ, ಕೆರೆಯ ಪೂರ್ವ ಭಾಗದಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದು, ತಡೆಗೋಡೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ
ಕಾಮಗಾರಿಗೆ ಬೇಕಾದ ಸಾಮಗ್ರಿಕೊಂಡೊಯ್ಯಲು ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದೇವೆ ಎಂದರು.
ಇನ್ನೂ, ಬಿಬಿಎಂಪಿಯ (ಕೆರೆ ವಿಭಾಗ) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಬಿಬಿಎಂಪಿಯು ಕೆರೆಯ ಮೇಲೆ ೨೫ ಅಡಿ ಅಗಲದ ಮಣ್ಣಿನ ರಸ್ತೆಯನ್ನು ಹಾಕಿದ್ದು, ಕೆರೆಯ ಹೂಳು ತೆಗೆಯಲು ಮಾಡಲು ವಾಹನಗಳನ್ನು ಚಲಿಸಲು ಬಳಸಲಾಗುತ್ತಿದೆ. ಕೆರೆಯ ಆವರಣದೊಳಗೆ ಕಂಡುಬರುವ ಮಣ್ಣಿನ ಗುಡ್ಡವನ್ನು ವಾಹನಗಳು ಒಳಗೆ ಚಲಿಸಲು ನಿರ್ಮಿಸಲಾಗಿದೆ. ಕೆರೆಯ ಹೂಳು ತೆಗೆಯಲು ಈ ವಾಹನಗಳನ್ನು ಬಳಸಲಾಗುವುದು. ಹೂಳು ತೆಗೆದ ಬಳಿಕ ಆವರಣದಲ್ಲಿರುವ ತಾತ್ಕಾಲಿಕ ಮಣ್ಣಿನ ಗುಡ್ಡವನ್ನು ತೆಗೆಯಲಾಗುವುದು. ಕೆರೆಯ ಮೇಲೆ ಯಾವುದೇ ರಸ್ತೆ ನಿರ್ಮಾಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.
ಪೋಸ್ಟರ್: ಮತ್ತೊಂದೆಡೆ, ಹೊಸಕೆರೆಹಳ್ಳಿ ಕೆರೆಯ ಮಧ್ಯದಲ್ಲಿ ನೂರಾರು ಟ್ರಕ್ಗಳ ಮಣ್ಣು ಸುರಿಯಲಾಗಿದೆ ಎಂಬ ಆರೋಪ ಕೇಳಿ ಬಂದ ಒಂದು ದಿನದ ನಂತರ, ಕೆರೆಯ ಮೂಲಕ ರಸ್ತೆ ನಿರ್ಮಿಸುತ್ತಿರುವುದನ್ನು ಬಿಬಿಎಂಪಿ ಸಾರ್ವಜನಿಕವಾಗಿ ನಿರಾಕರಿಸಿದೆ. ಬಿಬಿಎಂಪಿಯು ನೈರುತ್ಯ ಬೆಂಗಳೂರಿನಲ್ಲಿರುವ ಕೆರೆಯ ಕಸ ಮತ್ತು ಹೂಳು ತೆಗೆಯಲು ತಾತ್ಕಾಲಿಕ ಮಣ್ಣಿನ ದಿಬ್ಬಗಳನ್ನು ಮಾತ್ರ ರಚಿಸುತ್ತಿದೆ ಎಂದು ಸ್ಥಳದಲ್ಲಿ ಪೋಸ್ಟರ್ ಹಾಕಿದೆ.
ಹೊಸಕೆರೆಹಳ್ಳಿ ಕೆರೆಯಿಂದ ಕೆರೆಯೊಳಗೆ ಶಾಶ್ವತ ರಸ್ತೆ ನಿರ್ಮಿಸುವುದಿಲ್ಲ. ಕಸ ಮತ್ತು ಹೂಳು ತೆಗೆಯಲು ಟಿಪ್ಪರ್ಗಳು ಮತ್ತು ಯಂತ್ರಗಳ ಸಂಚಾರಕ್ಕೆ ತಾತ್ಕಾಲಿಕ ಮಣ್ಣಿನ ಗುಡ್ಡಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿದೆ.ಹೂಳು ತೆಗೆದ ನಂತರ ತಾತ್ಕಾಲಿಕ ಮಣ್ಣಿನ ದಿಬ್ಬವನ್ನು ತೆಗೆಯಲಾಗುವುದು ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಸ್ಥಳೀಯ ಪ್ರೀಮಿಯಂ ಅಪಾರ್ಟ್ಮೆಂಟ್ ಸಂಕೀರ್ಣದ ನಿವಾಸಿಗಳಿಗೆ ಸಹಾಯ ಮಾಡಲು ಬಿಬಿಎಂಪಿಯು ಕೆರೆಯ ಮೂಲಕ ೨೫ ಅಡಿ ಅಗಲದ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪೋಸ್ಟರ್ ಅವರನ್ನು ಗೊಂದಲಕ್ಕೀಡು ಮಾಡುವ ಉದ್ದೇಶವನ್ನು ಹೊಂದಿದೆ. ಪೋಸ್ಟರ್ ಸತ್ಯವನ್ನು “ಮರೆಮಾಡುವ” ಪ್ರಯತ್ನವಾಗಿದೆ. ಕೆರೆಯ ಹೂಳು ತೆಗೆಯಲು ಅದರೊಳಗೆ ಚಲಿಸುವ ಟ್ರಕ್ಗಳಿಗೆ ರಸ್ತೆಯಂತಹ ತಾತ್ಕಾಲಿಕ ಬಂಡ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಏನಿದು ಆರೋಪ?:ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಚಿತ್ರ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಬಳಿಕ ಹೇಳಿಕೆ ನೀಡಿರುವ ಬಿಬಿಎಂಪಿ, ಕೆರೆಯ ಹೂಳು ತೆಗೆಯಲು ವಾಹನಗಳ ಓಡಾಟಕ್ಕೆ ಉಪಯೋಗವಾಗಲಿ ಎಂದು ತಾತ್ಕಾಲಿಕ ಮಣ್ಣಿನ ದಿಬ್ಬಗಳನ್ನು ರಚಿಸಲಾಗಿದೆ. ಹೂಳು ತೆಗೆದ ಬಳಿಕ ಆವರಣದಲ್ಲಿರುವ ತಾತ್ಕಾಲಿಕ ಮಣ್ಣಿನ ಗುಡ್ಡವನ್ನು ತೆಗೆಯಲಾಗುವುದು ಎಂದು ತಿಳಿಸಿದೆ.