
ಬೆಂಗಳೂರು, ಮಾ.೮- ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರದ ಕಗ್ಗದಾಸಪುರ ವ್ಯಾಪ್ತಿಯಲ್ಲಿ ರಸ್ತೆ ದುರಸ್ಥಿ, ಒಳಚರಂಡಿ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಶಾಸಕ ಎಸ್.ರಘು ಅವರಿಗೆ ಹಿರಿಯ ನಾಗರೀಕರು, ಸ್ಥಳೀಯ ನಿವಾಸಿಗಳು ಮನವಿ ಪತ್ರ ಸಲ್ಲಿಕೆ ಮಾಡಿದರು.
ನಗರದಲ್ಲಿಂದು ಇಲ್ಲಿನ ಸಿ.ವಿ.ರಾಮನ್ನಗರದಲ್ಲಿರುವ ಶಾಸಕರ ನಿವಾಸಕ್ಕೆ ವಾರ್ಸೋವಾಲೇಔಟ್ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ನೇತೃತ್ವದಲ್ಲಿ ಭೇಟಿ ನೀಡಿದ ಹಿರಿಯ ನಾಗರೀಕರು, ಅನೇಕ ದಿನಗಳಿಂದ ರಸ್ತೆ ಸರಿಯಿಲ್ಲದ ಕಾರಣ ಸಂಚಾರವೇ ಕಷ್ಟಕರವಾಗಿದೆ. ಇನ್ನೂ, ಮಳೆಗಾಲದಲ್ಲಿಯೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ, ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅಸೋಸಿಯೇಷನ್ ಅಧ್ಯಕ್ಷೆ ಅರುಣಾ ರೆಡ್ಡಿ, ವಾರ್ಸೋವಾ ಲೇಔಟ್, ಕಗ್ಗದಾಸಪುರ ಮುಖ್ಯ ರಸ್ತೆಯೂ ಹದಗೆಟ್ಟಿದ್ದು, ಜನರ ಸಂಚಾರಕ್ಕೆ ಭಾರೀ ಸಮಸ್ಯೆ ಎದುರಾಗಿದೆ. ಈಗಾಗಲೇ ಹಲವು ಬಾರಿ ಸಂಬಂಧಿಸಿದ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ನೇರವಾಗಿ ಶಾಸಕರಿಗೆ ಮನವಿ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ, ಈ ಹಿಂದೆಯೇ ಭಾರೀ ಸಮಸ್ಯೆ ಎದುರಾಗಿತ್ತು. ಆಗ ಸ್ಥಳೀಯೇ ಸೇರಿಕೊಂಡು ರಸ್ತೆಗೆ ಸಿಮೆಂಟ್ ಅನ್ನು ಹಾಕಲಾಯಿತು. ಅಲ್ಲದೆ, ಈ ರಸ್ತೆ ದುರಸ್ಥಿ, ಒಳಚರಂಡಿ ವ್ಯವಸ್ಥೆಗೆ ಈಗಾಗಲೇ ಅನುದಾನ ಬಿಡುಗಡೆ ಆಗಿರುವ ಮಾಹಿತಿ ಇದೆ. ಆದರೂ, ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಮತ್ತೊಂದೆಡೆ, ಹಿರಿಯ ನಾಗರೀಕರು, ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟಕರ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.