
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ.12- ಕೇರಳ ಆರೋಗ್ಯ ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಿರಿ ಹಾಗೂ ವೈದ್ಯರಿಗೆ ಅಗತ್ಯ ಸುರಕ್ಷಾ ವ್ಯವಸ್ಥೆ ಕಲ್ಪಿಸಿ ಎಂದು ಎಐಡಿಎಸ್ಓ ಆಗ್ರಹಿಸಿದೆ.
ಸಂಘಟನೆಯ ಜಿಲ್ಲಾ ಸಮಿತಿಯಿಂದ ಕೇರಳದ ಡಾಕ್ಟರ್ ವಂದನಾ ದಾಸ್ ಅವರ ಹತ್ಯೆ ಹಾಗೂ ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ ವೈದ್ಯಕೀಯ ವಿದ್ಯಾರ್ಥಿಗಳಿಂದ ನಗರದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ರವಿಕಿರಣ್.ಜೆ.ಪಿ ಅವರು ಮಾತನಾಡಿ,ಕೇರಳದ ಕೊಟ್ಟರಕರ್ ತಾಲೂಕಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಪೋಲಿಸರೊಂದಿಗೆ ಬಂದಿದ್ದ ಮಾದಕ ದ್ರವ್ಯ ಸೇವಿಸಿರುವ ವ್ಯಕ್ತಿಯು ಅಲ್ಲಿನ ವೈದ್ಯರ ಮೇಲೆ ಆಕ್ರಮಣ ಮಾಡಿದ್ದರಿಂದ ಡಾ. ವಂದನಾ ದಾಸ್ ಹತ್ಯೆಗೊಳಗಾಗಿದ್ದಾರೆ. ಸರ್ಕಾರ ಹಾಗೂ ಪೋಲಿಸರ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ಘಟಿಸಿದೆ. ಖೈದಿಯನ್ನು ಸಮರ್ಪಕ ರಕ್ಷಣೆಯಿಲ್ಲದೆ ಆಸ್ಪತ್ರೆಗೆ ಕರೆತರಲಾಗಿದೆ. ಖೈದಿಯು ಮಾದಕ ದ್ರವ್ಯ ಸೇವಿಸಿದ್ದಾಗಿಯೂ ಸಮರ್ಪಕ ರಕ್ಷಣೆ ನೀಡದೇ ವೈದ್ಯರ ನಡುವೆ ಬಿಟ್ಟು ವೈದ್ಯರನ್ನು ಅಪಾಯಕ್ಕೆ ತಳ್ಳಿರುವುದು ಪೋಲಿಸರ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ಪೋಲಿಸರು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಆಗಿರುವ ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕಿತ್ತು. ಬದಲಾಗಿ ಆರೋಗ್ಯ ಸಚಿವರು, ವೈದ್ಯೆ ಅನಾನುಭವಿಯಾಗಿದ್ದರಿಂದ ಇಂತಹ ಘಟನೆ ಜರುಗಿದೆ ಎಂಬ ಹೇಳಿಕೆಯು ವೈದ್ಯರ ಕುರಿತಾಗಿ ಸರ್ಕಾರದ ಧೋರಣೆಯು ವ್ಯಕ್ತವಾಗುತ್ತಿದೆ. ಅವರ ಬೇಜವಾಬ್ದಾರಿ ಹೇಳಿಕೆಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಎಐಡಿಎಸ್ಓ ಆಗ್ರಹಿಸುತ್ತದೆ. ಹಾಗೂ ಸರ್ಕಾರವು ವೈದ್ಯರಿಗೆ ರಕ್ಷಣೆ ಖಾತ್ರಿಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಕೆ. ಈರಣ್ಣ, ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯೆ ಎಮ್.ಶಾಂತಿ, ನಿಹಾರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.