ಯುವಜನತೆಗೆ ಸಂವೇದನಾಶೀಲ ಅಭಿಪ್ರಾಯ ಮೂಡಿಸಿದ್ದು ನಟ ಪುನೀತ್ ರಾಜ್‍ಕುಮಾರ್: ಡಾ.ಹೆಚ್.ಸಿ.ಮಹದೇವಪ್ಪ

ಸಂಜೆವಾಣಿ ನ್ಯೂಸ್
ಮೈಸೂರು,ಅ.30:- ನಟನೆಯನ್ನೇ ಜೀವನದ ಸರ್ವಸ್ವವೆಂದು ತಿಳಿದು, ರಾಜ್ಯದ ಯುವಜನತೆಗೆ ಸಂವೇದನಾಶೀಲತೆಯ ಅಭಿಪ್ರಾಯವನ್ನು ಮೂಡಿಸಿದವರು ಪ್ರತಿಭಾನ್ವಿತ ನಟ ಡಾ.ಪುನೀತ್ ರಾಜ್‍ಕುಮಾರ್ ಅವರು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಅವರ ಹಗಲಿಕೆಯು ತುಂಬಲಾರದ ನಷ್ಟ ಎಂದು ಹೇಳಿದರು.
ನಟ ಪುನೀತ್ ರಾಜ್‍ಕುಮಾರ್ ಅವರು ಯುವಸಮೂಹವನ್ನು ಹೆಚ್ಚು ಪ್ರಭಾವಿಸಿದ್ದರು. ಅವರ ಸವಿನೆನಪಲ್ಲಿ ಇಲ್ಲಿನ ಎಳೆಯ ಮಕ್ಕಳಿಗೆ ನಮ್ಮ ನೆಲ, ಜಲ, ಕಾಡು, ಮೇಡು, ಪರಿಸರ ಕುರಿತಂತೆ ‘ಗಂಧದಗುಡಿ’ ಶಿರ್ಷಿಕೆಯಡಿ ಸ್ಥಳದಲ್ಲೇ ಚಿತ್ರಕಲಾಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಇದು ಪರಿಸರ ಸಂರಕ್ಷಣೆಗೆ ಪೂರಕವಾದ ಅರಿವನ್ನು ಮೂಡಿಸಲಿದೆ ಎಂದು ಹೇಳಿದರು.
ವನ್ಯಜೀವಿಗಳು ನಮ್ಮ ದೇಶಕ್ಕೆ ಅಮುಲ್ಯವಾದ ಸಂಪತ್ತು. ಕಾಡಿನ ಪ್ರಾಣಿ, ಪಕ್ಷಿ ವಿವಿಧ ಜೀವ ಸಂಕುಲಗಳ ಬಗ್ಗೆ ತಿಳಿಯುವುದೇ ಒಂದು ಕೌತುಕ. ಈ ನಿಟ್ಟಿನಲ್ಲಿ ಮಕ್ಕಳು ಮನಸ್ಸಿನಲ್ಲಿ ಮೂಡಿದ ಪರಿಕಲ್ಪನೆಯಲ್ಲಿ ಕುಂಚದ ಮೂಲಕ ಬಿಡಿಸುವ ಚಿತ್ರಗಳು ಅವರ ಸೃಜನಶೀಲತೆಯ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅನೇಕ ಪರಿಕಲ್ಪನೆಯಡಿ ಬಿಡಿಸಿದ ಚಿತ್ರವು ವಿಶ್ವಖ್ಯಾತಿ ಪಡೆದಿವೆ. ಅದಕ್ಕೆ ರವಿವರ್ಮನ ಕುಂಚದಲ್ಲಿ ಅರಳಿದ ಚಿತ್ರಗಳೇ ಸಾಕ್ಷಿ. ಅವರ ಚಿತ್ರಕ್ಕೆ ಸರಿಹೊಂದುವ ಚಿತ್ರಗಳು ಇದುವರೆಗೂ ಮೂಡಿಬಂದಿಲ್ಲ. ಇದಕ್ಕೆ ಪ್ರಮುಖವಾಗಿ ಏಕಾಗ್ರತೆ, ಮನಸ್ಸಿನ ನಿಗ್ರಹ, ಅತ್ಯುತ್ತಮ ಕಲ್ಪನೆ ಅವಶ್ಯಕ. ಸಮಚಿತ್ತತೆಯು ಮನುಷ್ಯನನ್ನು ಸಾಧನೆಗೆ ಪ್ರೇರೆಪಿಸುತ್ತದೆ ಎಂದು ತಿಳಿಸಿದರು.
ಎಲ್ಲಾ ಸಮುದಾಯದ ಜನರು ಒಟ್ಟಾಗಿ ಸಾಗಿದರೆ ಎಲ್ಲರ ಸಾಂಸ್ಕೃತಿಕ ಬದುಕನ್ನು ವಿಶ್ಲೇಷಣೆ ಮಾಡಿ ದೇಶಕ್ಕೆ ಒಗ್ಗಟ್ಟಿನ ಸಂದೇಶ ಹೇಗೆ ನೀಡಬಹುದು ಎಂಬುದನ್ನು ನಾವೆಲ್ಲರೂ ಈ ದಸರೆಯಲ್ಲಿ ನಿರೂಪಿಸಿದ್ದೇವೆ.
ದಸರಾ ಇಷ್ಟೊಂದು ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದ ಮೈಸೂರಿನ ಸಮಸ್ತ ಜನತೆಗೆ, ಪಕ್ಷತೀತವಾಗಿ ಬೆಂಬಲ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ, ಅಧಿಕಾರಿ ವರ್ಗಕ್ಕೆ, ಸ್ವಚ್ಚತೆ ಕಾಪಾಡಿದ ಪೌರಕಾರ್ಮಿಕರಿಗೆ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ನಗರ ಪಾಲಿಕೆ ಸದಸ್ಯರಾದ ಛಾಯಾದೇವಿ, ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್ ಜಿ.ಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.