ಯುವಕನ ಕತ್ತು ಕುಯ್ದು ಭೀಕರ ಹತ್ಯೆ

ತುಮಕೂರು, ಜೂ. 5- ಯುವಕನ ಕತ್ತು ಕುಯ್ದು ಭೀಕರವಾಗಿ ಕೊಲೆಗೈದಿರುವ ಘಟನೆ ನಗರದ ಹೊರವಲಯದ ಅಂತರಸನಹಳ್ಳಿ ಮಾರುಕಟ್ಟೆ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು ಬಿಹಾರ ಮೂಲದ ಲಖನ್ ಮಾನ್ಸಿ ಎಂದು ಗುರುತಿಸಲಾಗಿದೆ.

ಕೊಲೆಯಾಗಿರುವ ಯುವಕ ಅಂತರಸನಹಳ್ಳಿಯ ತರಕಾರಿ ಮಾರುಕಟ್ಟೆ ಸಮೀಪವಿರುವ ಸುಲಭ ಶೌಚಾಲಯದಲ್ಲಿ ಶುಚಿಗೊಳಿಸುವ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಯಾರೋ ದುಷ್ಕರ್ಮಿಗಳು ಈ ಯುವಕನನ್ನು ಶೌಚಾಲಯದಲ್ಲಿ ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದು, ಈ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದಷ್ಟೇ ಈ ಕೊಲೆ ಪ್ರಕರಣದ ಸ್ಪಷ್ಟ ಮಾಹಿತಿ ಹೊರ ಬೀಳಬೇಕಿದೆ.

ಹತ್ಯೆಯಾದ ಯುವಕ ಬಿಹಾರದ ಮೂಲದವನಾಗಿದ್ದು ಕಳೆದ ಆರು ತಿಂಗಳಿಂದ ಮಾರುಕಟ್ಟೆಯಲ್ಲಿ ಶೌಚಾಲಯವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.