ಯುಪಿಎಸ್‍ಸಿಯಲ್ಲಿ ಮೈಸೂರಿನ ಮೂವರು ಟಾಪರ್

ಮೈಸೂರು: ಮೇ.24:- ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ರಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿ£ ಮೂವರು ಸಾಧನೆ ಮಾಡಿದ್ದಾರೆ.
260ನೇ ರ್ಯಾಂಕ್: ಮೈಸೂರು ವಿಶ್ವ ವಿದ್ಯಾನಿಲಯದ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆಂಪರಾಜು ಅವರ ಪುತ್ರ ಕೆ.ಸೌರಭ್ ಯುಪಿಎಸ್ಸಿಯಲ್ಲಿ 260ನೇ ರ್ಯಾಂಕ್‍ನ ಸಾಧನೆ ಮಾಡಿದ್ದಾರೆ. ಸದ್ಯ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡೆಹರಡೂಣ್‍ನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಇವರು, ತಮ್ಮ ಎರಡನೇ ಪ್ರಯತ್ನದಲ್ಲಿ ಐಎಎಸ್ ಉತ್ತೀರ್ಣರಾಗಿದ್ದಾರೆ. ತರಬೇತಿಯಲ್ಲಿದ್ದಾಗಲೇ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಎಂಟೆಕ್ ಪದವೀಧರರಾಗಿದ್ದ ಕೆ.ಸೌರಭ್ ಸಮಾಜಶಾಸ್ತ್ರ ವಿಷಯದಲ್ಲಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದರು. ತಾಯಿ ಡಾ.ಜಾನಕಿ ಕೂಡ ಪ್ರಾಧ್ಯಾಪಕರಾಗಿದ್ದಾರೆ.
390ನೇ ರ್ಯಾಂಕ್: ಸತತ ಎರಡನೇ ಪ್ರಯತ್ನದಲ್ಲಿ ಮೈಸೂರಿನ ಪೂಜಾ ಮುಕುಂದ್ 390ನೇ ರ್ಯಾಂಕ್ ಪಡೆದಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆದರೂ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿನಿ ಪೂಜಾ ಮುಕುಂದ್, ತಾಯಿ ಇಂತಹದೊಂದು ಪರೀಕ್ಷೆಯಲ್ಲಿ ಪಾಸ್ ಮಾಡಬೇಕೆಂಬ ಆಸೆ ಹಾಗೂ ಪ್ರಯತ್ನ ನಡೆಸಿದ್ದರು ಆಗಿರಲಿಲ್ಲ. ಹೀಗಾಗಿ ಅವರ ಆಸೆಯಂತೆ ಸಾಧನೆ ಮಾಡಿದ್ದೇನೆ. ನಾನು ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗಿ ತಯಾರಿ ಮಾಡಿಲ್ಲ. ಮನೆಯಲ್ಲೇ ಎಲ್ಲಾ ತಯಾರಿ ಮಾಡಿದ್ದಿನಿ. ಇದಕ್ಕೆ ನನ್ನ ಕುಟುಂಬದ ಸಹಕಾರದಿಂದ ಪಾಸ್ ಮಾಡಲು ಸಹಕಾರಿಯಾಯಿತೆಂದು ಸಂತಸ ಹಂಚಿಕೊಂಡಿದ್ದಾರೆ.
448ನೇ ರ್ಯಾಂಕ್:
ಮೈಸೂರಿನ ಬೆಳವಾಡಿಯ ಜೆ.ಭಾನುಪ್ರಕಾಶ್ 448ನೇ ರ್ಯಾಂಕ್ ಪಡೆದು ಸಂಭ್ರಮಿಸಿದ್ದಾರೆ. ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಭಾನುಪ್ರಕಾಶ್ ಅವರ ತಂದೆ ಜಯರಾಮೇಗೌಡ ಅವರು ಕೃಷಿಕ. ತಾಯಿ ಗಿರಿಜಮ್ಮ ಅಂಗನವಾಡಿ ಶಿಕ್ಷಕಿ. 1ರಿಂದ 5ನೇ ತರಗತಿವರೆಗೆ ಬೆಳವಾಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ ಅವರು, 6ರಿಂದ 12ನೇ ತರಗತಿವರೆಗೆ ಚಾಮರಾಜನಗರದ ಹೊಂಡರಬಾಳಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಮಂಡ್ಯ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಎಂಬಿಬಿಎಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಎಂ.ಡಿ ಪಿಡಿಯಾಟ್ರಿಕ್ಸ್ ಪದವಿ ಪಡೆದಿದ್ದಾರೆ. ಸದ್ಯ ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕಳೆದೆರಡು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ಮೂರನೇ ಬಾರಿ ತೇರ್ಗಡೆಯಾಗಿದ್ದಾರೆ.
ತಮ್ಮ ಸಾಧನೆ ಕುರಿತು ಮಾತನಾಡಿರುವ ಅವರು, ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಆಗ, ನಾಗರಿಕ ಸೇವಾ ಅಧಿಕಾರಿಯಾಗಬೇಕು, ಸಮಾಜಕ್ಕೆ ಇನ್ನಷ್ಟು ಸೇವೆ ಮಾಡಬೇಕೆಂಬ ಕನಸು ಮೂಡಿತು. ಆ ವೇಳೆ ಮದುವೆಯೂ ಆಗಿತ್ತು. ಮಗ ಅಥರ್ವ ಕೂಡ ಹುಟ್ಟಿದ್ದ. ಎಲ್ಲ ಜವಾಬ್ದಾರಿಗಳೊಟ್ಟಿಗೆ ತಯಾರಿಯನ್ನು ಆರಂಭಿಸಿದೆ. ಸಂಜೆ 5 ಗಂಟೆಗೆ ಕಾಲೇಜು ಮುಗಿಸಿ ಬಂದರೆ, ನಿತ್ಯ 4ರಿಂದ 5 ಗಂಟೆ ಅಭ್ಯಾಸ ನಡೆಸಿದ್ದೆ. ಒಂದೂ ದಿನ ಸಬೂಬು ನನ್ನಲ್ಲಿಯೇ ಹೇಳಿಕೊಂಡಿಲ್ಲ. ಕಡಿಮೆ ಅವಧಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಒತ್ತಡವಿದ್ದರಿಂದ ನಿರ್ಲಕ್ಷ್ಯ ಮಾಡುವಂತಿರಲಿಲ್ಲ. ನನ್ನ ಮೂವತ್ತೆರಡೂವರೆ ವರ್ಷಕ್ಕೆ ಪಾಸು ಮಾಡಿದ್ದೇನೆಂದರು.