
ಬೆಂಗಳೂರು, ಮೇ.15- ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ 135 ಶಾಸಕರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ಸಿಎಂ ಆಯ್ಕೆ ತೀರ್ಮಾನವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲು ಎಲ್ಲಾ ಶಾಸಕರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾರ ನಂಬರ್ ಬಗ್ಗೆ ಮಾತನಾಡುವ ಶಕ್ತಿ ಇಲ್ಲ ಎಂದು ತಿಳಿಸಿದರು.
ನನ್ನ ವೈಯಕ್ತಿಕ ಬೆಂಬಲಕ್ಕೆ ಹೆಚ್ಚಿನ ಶಾಸಕರ ಸಂಖ್ಯಾಬಲವಿಲ್ಲದಿರಬಹುದು, ಆದರೆ ಪಕ್ಷದ 135 ಶಾಸಕರ ಸಂಖ್ಯೆ ನನ್ನ ಸಂಖ್ಯೆ. ನನ್ನನ್ನು ಪಕ್ಷದ ಅಧ್ಯಕ್ಷನಾಗಿ ಆಯ್ಕೆ ಮಾಡಿದಾಗ ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಭರವಸೆ ನೀಡಿದ್ದೆ. ನಾನು ಕೊಟ್ಟ ಮಾತನ್ನು ಈಡೇರಿಸಿದ್ದೇನೆ
ಎಂದು ಅವರು ಸ್ಪಷ್ಡಪಡಿಸಿದರು.
ಇಂದು ನಮ್ಮ ವರಿಷ್ಠರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ. ನಾನು ಹೋಗುವುದು ಸ್ವಲ್ಪ ತಡವಾಗಲಿದೆ ಎಂದರು.
ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಉತ್ತಮವಾಗಿ ಸಂಘಟನೆ ಮಾಡಿದ್ದರೆ ನಮ್ಮ ಸಂಖ್ಯೆ ಇನ್ನು ಸ್ವಲ್ಪ ಹೆಚ್ಚಾಗುತ್ತಿತ್ತು. ಆದರೂ ಈಗ ಬಂದಿರುವ ಫಲಿತಾಂಶಕ್ಕೆ ಡಿಕೆಶಿ ತೃಪ್ತಿ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ಹಾಗೂ ಭ್ರಷ್ಟಾಚಾರ ವಿರುದ್ಧ ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ 135 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಚುನಾವಣೆ ನಡೆಸಿದ ರೀತಿ, ಒಗ್ಗಟ್ಟಿನ ಪ್ರದರ್ಶನ ಎಲ್ಲವೂ ದೇಶಕ್ಕೆ ಮಾದರಿಯಾಗಿದ್ದು, ಅನೇಕ ನಾಯಕರುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಓರ್ವ ವ್ಯಕ್ತಿ. ನಾನು ಧೈರ್ಯವಾಗಿ ಪಕ್ಷವನ್ನು ಮುನ್ನಡೆಸಿದ್ದು, ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಏನೆಲ್ಲಾ ಆಗಿದೆ ಎಂದು ನಾನು ಬಹಿರಂಗಪಡಿಸುವುದಿಲ್ಲ. ಭವಿಷ್ಯದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ನಾವು ಮೈತ್ರಿ ಸರ್ಕಾರ ಕಳೆದುಕೊಂಡಾಗ ಶಾಸಕರು ಪಕ್ಷ ಬಿಟ್ಟು ಹೋದಾಗ ನಾವು ಧೃತಿಗೆಡಲಿಲ್ಲ. ಧೈರ್ಯವಾಗಿ ಜವಾಬ್ದಾರಿ ಹೊತ್ತು, ಕೆಲಸ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನನಗೆ ಧೈರ್ಯ ತುಂಬಿದ್ದು, ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು.