ಯಾರು ಹಿತವರು ಈ ಮೂವರೊಳಗೆ

ಕೋಲಾರ,ಮೇ,೧:ಮತದಾನ ದಿನ ಸನ್ನಿಹಿತವಾಗುತ್ತಿದ್ದಂತೆಯೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೆಂದೂ ಕಾಣದ ರಾಜಕೀಯ ವಿಧ್ಯಮಾನಗಳು ನಡೆದು ಹೋಗುತ್ತಿವೆ. ಪ್ರತಿ ಘಳಿಗೆಗೂ ಕ್ಷೇತ್ರ ರಾಜಕೀಯ ಚಿತ್ರಣವು ಬದಲಾಗುತ್ತಿದೆ. ಮತದಾರನು ತನ್ನ ಅಂತಿಮ ನಿರ್ಣಯಕ್ಕೆ ಬರುವುದಕ್ಕೆ ಗೊಂದಲ ಉಂಟಾಗಿದೆ!
ರಾಹುಲ್‌ಗಾಂಧಿ ಕ್ಷೇತ್ರಕ್ಕೆ ಬಂದರು, ಆದಾನಿಗೆ ಇಪ್ಪತ್ತು ಸಾವಿರ ಕೋಟಿ ಯಾರಿಂದ, ಹೇಗೆ, ಏತಕ್ಕೆ ಬಂತು? ಆದಾನಿ ಆಡಳಿತ ಸಮಿತಿಯಲ್ಲಿರುವ ಚೀನಿಯನ ಪಾತ್ರವೇನು? ಎಂದು ಪ್ರಶ್ನೆ ಮುಂದಿಟ್ಟರು. ದೇಶ ಎಂದರೆ ರಾಷ್ಟ್ರಜನತೆಯ ಬದುಕು ಎಂದು ಹೇಳಿದರುಇದೀಗ ಮೋದಿಯೂ ಬಂದಿದ್ದಾರೆ, ಕನ್ನಡಭಾಷೆಲ್ಲಿಯೇ ತಮ್ಮ ಭಾಷಣವನ್ನು ಆರಂಭಿಸಿ ನೆರೆದ ಜನರ ಕರತಾಡನದ ಬುಗ್ಗೆಯನ್ನೇ ಹರಿಸಿದರು. ಈ ಜನಸ್ತೋಮವನ್ನು ನೋಡಿಯೇ ಕಾಂಗ್ರೆಸ್, ಜೆಡಿಎಸ್‌ರವರ ನಿದ್ದೆಯೇ ಹಾರಿಹೋಗುವುದು ಎಂದು ಹೇಳಿದರು.
ನಮಗೆ ಹಣಬಲವಿಲ್ಲ, ಆದರೆ ಜನಬಲವಿದೆ ಎಂಬ ಸಂದೇಶ ಈಗಾಗಲೇ ಸಾಮಾಜಿಕವಲಯಗಳಿಗೆ ಜೆಡಿಎಸ್ ಪಾಳೇಯದಿಂದ ಹಾರಿಬಂದಾಗಿದ್ದಾಗಿದೆ.ಆದರೆ ಮತದಾರನು ಗೊಂದಲದಲ್ಲಿದ್ದಾನೆ, ಕೋಲಾರ ಕ್ಷೇತ್ರದ ಅನೇಕ ಕುಗ್ರಾಮಗಳಿಗೆ ಇನ್ನೂ ರಸ್ತೆಯಿಲ್ಲ, ಎಷ್ಟೋ ಗ್ರಾಮಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳು ಬೇಕಿವೆ, ಕನಿಷ್ಟಪಕ್ಷ ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಒಬ್ಬರಂತೆ ವೈಧ್ಯರು ಬೇಕು, ಪೊಲೀಸರು ಬೇಕು, ಶಿಕ್ಷಕರು ಬೇಕು, ಪೌರಕಾರ್ಮಿಕರು ಬೇಕು, ನ್ಯಾಯಬೆಲೆ ಅಂಗಡಿ ಬೇಕು, ಸಾಮಾಜಿಕ ಭದ್ರತೆ ಸೇವಾಕೇಂದ್ರಗಳು ಬೇಕು. ವಿದ್ಯುತ್ ವಿತರಣಾ ಕೇಂದ್ರ ಬೇಕು, ಔಷಧ ವಿತರಣಾ ಕೇಂದ್ರ ಬೇಕು, ಆಸ್ಪತ್ರೆ ಬೇಕು, ಶಾಲಾ-ಕಾಲೇಜುಗಳು ಬೇಕು. ಆದರೆ ಎಲ್ಲೆಲ್ಲಿಗೆ ಏನೇನು ಬೇಕು ಎಂದು ಕಂಡುಕೊಳ್ಳುವವರಿಲ್ಲದಾಗಿದೆ.
ಈಗಾಗಲೇ ಕ್ಷೇತ್ರವಿಡೀ ಸಭೆ, ಸಮಾರಂಭಗಳ ಸಮಾವೇಶಗಳು ಶುರುವಾಗಿವೆ. ಎಲ್ಲಾ ಕಡೆ ಚಪ್ಪಾಳೆ ತಟ್ಟಲು ಸಾವಿರಾರು ಜನರನ್ನು ಕರೆತರಲಾಗುತ್ತಿದೆ. ಪ್ರತಿದಿನಕ್ಕೂ ಪ್ರಮುಖ ಅಭ್ಯರ್ಥಿಗಳು ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದಾರೆ. ಎಲ್ಲೆಡೆ ಬಾಡೂಟದ ಘಮಲು, ಸಾರಾಯಿ ಸೀಸೆಗಳ ಸದ್ದು, ಪುಡಿ ನೋಟುಗಳ ಹಾರಾಟ ಅವ್ಯಾಹಿತವಾಗಿದೆ. ಚರಿತ್ರೆಯನ್ನೇ ತಿರುಚಿ ರಾಜಾರೋಷವಾಗಿ ಸಾವಿರಾರು ಜನರ ಮುಂದೆ ಭಾಷಣ ಮಾಡಲಾಗುತ್ತಿದೆ! ಸುಳ್ಳುಗಳನ್ನೇ ಸುಳ್ಳೆಂದು ಗೊತ್ತಿದ್ದೂ ನಿಜವೆಂಬಂತೆ ಸಾವಿರಾರು ಜನರ ಮುಂದೆ ಭಾಷಣ ಮಾಡಲಾಗುತ್ತಿದೆ! ಕ್ಷೇತ್ರಜನತೆ ಈ ಅದ್ಧೂರಿ ಆಟಗಳನ್ನು ನೋಡುತ್ತಿದ್ದು ಬಿಟ್ಟಿದ್ದಾರೆ!
ಕ್ಷೇತ್ರದಲ್ಲಿ ಸ್ಥಳೀಯ ಆಡಳಿತವನ್ನಾದರೂ ಸಮರ್ಥವಾಗಿ, ಸರಿಯಾಗಿ ನಡೆಸುವ ವಿದ್ಯಾವಂತ ಅಭ್ಯರ್ಥಿಯ ಅವಶ್ಯಕತೆ ಇದೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ. ಮತದಾರನು ಯಾರ ಕಡೆ ಇದ್ದಾನೆ ಎಂಬುದನ್ನು ಮತಎಣಿಕೆಯವರೆಗೂ ಕಾದುನೋಡಬೇಕು. ಏಕೆಂದರೆ ಮತದಾರ ತನ್ನ ಗುಟ್ಟುಬಿಟ್ಟುಕೊಟ್ಟಿಲ್ಲ!