ಯಶಸ್ಸಿಗೆ ಕಠಿಣ ಪರಿಶ್ರಮ ಅತ್ಯವಶ್ಯಕ : ಮಹಾವೀರ ಬೋರಣ್ಣನವರ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.15: ಉದ್ಯಮದಾರರು ಮುಖ್ಯವಾಗಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು ಕೈಗೊಳ್ಳಬೇಕಾಗಿರುವ ಕಾರ್ಯ ಮೊಟಕುಗೊಳಿಸದೇ, ಹಿಡಿದ ಕಾರ್ಯ ಯಶಸ್ವಿಯಾಗುವತ್ತ ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆಯ ಉಪ ಆಯುಕ್ತರ ಮಹಾವೀರ ಬೋರಣ್ಣನವರ ಹೇಳಿದರು.
ಅವರು ನಗರದ ಹೊರವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಸಿಹಿ ನೀರು ಅಲಂಕಾರಿಕ ಮೀನು ಸಾಕಾಣಿಕೆ ಕುರಿತ ಮೂರು ದಿವಸಗಳ ತರಬೇತಿ ಕಾರ್ಯಗಾರದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಗುರಿ ಸಾಧನಾ ಪಥದ ನಡುವೆ ಸಮಸ್ಯೆ ಉದ್ಭವಿಸಿದರೆ ಪರಿಹಾರ ಕಂಡುಕೊಂಡು,ಎದುರಿಸುವ ಚಾಕಚಕ್ಯತಾ ಪ್ರವೃತ್ತಿ ಹಾಗೂ ಕಷ್ಟಗಳ ಜಯಿಸಿ,ಅವುಗಳ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುವವರು ಮಾತ್ರ ಯಶಸ್ವಿ ಹಾಗೂ ಸುಸ್ಥಿರ ಉದ್ಯಮಿ ಎನಿಸಿಕೊಳ್ಳಬಹುದು ಎಂದರು.
ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರೇಣುಕಾ ಸದಸಪ್ಪಗೋಳ ಅವರು ಮಾತನಾಡಿ, ಮಹಿಳೆಯರು ಉದ್ಯಮಿಯಾದರೆ ಅವರ ಕುಟುಂಬದ ಆರ್ಥಿಕ ವ್ಯವಸ್ಥೆ ಸುಸ್ಥಿರಗೊಳ್ಳುತ್ತದೆ ಎಂದರು
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹಲವಾರು ಅವಕಾಶಗಳಿದ್ದು, ಸ್ವ ಉದ್ಯೋಗ ಆರಂಭಿಸುವವರು ಇದರ ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿದಾರರಾಗಬಹುದು
ಎಂದು ಭೂತನಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಎಸ್.ವಿಜಯ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಎಸ್ ವಿಜಯ್ ಆತನೂರ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.