ಶಿವಮೊಗ್ಗ, ಎ. 24: ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಪ್ರಮುಖ ಪಕ್ಷಗಳಲ್ಲಿ ಸ್ಟಾರ್ ಪ್ರಚಾರಕರ ಕ್ಯಾಂಪೇನ್ ಕೂಡ ಜೋರಾಗುತ್ತಿದೆ. ಈ
ಕಾರಣದಿಂದ ಹೆಲಿಕ್ಯಾಪ್ಟರ್ ಗಳ ಹಾರಾಟವೂ ಹೆಚ್ಚಾಗಲಾರಂಭಿಸಿದೆ.
ಈ ನಡುವೆ ಬಿಜೆಪಿ ಪಕ್ಷವು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಚುನಾವಣಾ ಪ್ರಚಾರ
ಕಾರ್ಯಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಪ್ರತ್ಯೇಕ
ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿದೆ ಎಂದು ತಿಳಿದುಬಂದಿದೆ!
ಸೀಮಿತಾವಧಿಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಯಡಿಯೂರಪ್ಪರನ್ನು ಪ್ರಚಾರಕ್ಕೆ
ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಹಾಗೂ ವಯೋಸಹಜ ಕಾರಣಗಳ ಹಿನ್ನೆಲೆಯಲ್ಲಿ, ಬಿಜೆಪಿ
ವರಿಷ್ಠರು ಚುನಾವಣೆ ಪೂರ್ಣಗೊಳ್ಳುವವರೆಗೂ ಯಡಿಯೂರಪ್ಪ ಅವರಿಗೆ ಪ್ರತ್ಯೇಕ
ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಯಡಿಯೂರಪ್ಪ ಅವರು ಹೆಲಿಕ್ಯಾಪ್ಟರ್ ಮೂಲಕವೇ ಚುನಾವಣಾ ಪ್ರಚಾರ
ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾರಿನ ಮೂಲಕ ಓಡಾಟ ಕಡಿಮೆಯಾಗಿದೆ ಎಂದು
ಬಿಜೆಪಿ ಮೂಲಗಳು ಹೇಳುತ್ತವೆ.
ಸೋಮವಾರ ಕೂಡ ಶಿವಮೊಗ್ಗ ಗ್ರಾಮಾಂತರ ಮತ್ತೀತರ ಕಡೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಲು
ಯಡಿಯೂರಪ್ಪರವರು ಶಿಕಾರಿಪುರದಿಂದ ಶಿವಮೊಗ್ಗ ನಗರಕ್ಕೆ ಹೆಲಿಕ್ಯಾಪ್ಟರ್ ನಲ್ಲಿ
ಆಗಮಿಸಿದ್ದರು.
ಉತ್ತರದತ್ತ ಚಿತ್ತ: ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯಿತ ಸಮುದಾಯದ ಮುಖಂಡರಾದ
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್
ಸೇರ್ಪಡೆಯಾಗಿದ್ದಾರೆ.
ಈ ಕಾರಣದಿಂದ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳತ್ತ ಯಡಿಯೂರಪ್ಪರ ಹೆಚ್ಚಿನ
ಪ್ರಚಾರ ಸಭೆ ಆಯೋಜಿಸಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ ಎಂದು ಹೇಳಲಾಗುತ್ತಿದೆ.