ಮೋದಿ ವಿಷದ ಹಾವಿದ್ದಂತೆ, ನೆಕ್ಕಿದರೆ ಸತ್ತೇ ಹೋಗ್ತೀರಿ: ಖರ್ಗೆ ವಿವಾದಾಸ್ಪದ ಹೇಳಿಕೆ

ಗದಗ್, ಏ.26-ಪ್ರಧಾನಿ ನರೇಂದ್ರ ವಿಷದ ಹಾವಿದ್ದಂತೆ. ಒಂದು ವೇಳೆ ಅವರನ್ನು ನೆಕ್ಕಿ ನೋಡಿದರೆ ಸತ್ತೆ ಹೋಗುತ್ತೀರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಸ್ಪದ ಹೇಳಿಕೆ ನೀಡಿದ್ದಾರೆ.
ಗದಗ್ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾವು ಕನ್ನಡಿಗರು, ನಾವು ಯಾರಿಗೂ ಬಗ್ಗುವುದಿಲ್ಲ. ಗುಜರಾತ್, ಅಹ್ಮದಾಬಾದ್‍ನಿಂದ ಯಾರೇ ಬರಲಿ ಹೆದರಬೇಡಿ. ನಾವು ಕನ್ನಡಿಗರು, ಕರ್ನಾಟಕದವರು ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕು ಕರೆಕೊಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಣಣ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಮನೆಯ ಯಜಮಾನಿಗೆ 2 ಸಾವಿರ ಸಹಾಯಧನ ಕೊಡುತ್ತೇವೆ. ಕೆಲಸ ಇಲ್ಲದ ಪದವಿಧರರಿಗೆ 3 ಸಾವಿರ ಯುವನಿಧಿ ಪ್ರೋತ್ಸಾಹ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಉಲ್ಟಾ ಹೊಡೆದ ಖರ್ಗೆ
ಪ್ರಧಾನಿ ನರೇಂದ್ರ ಮೋದಿ ವಿರುದ್ದ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಮಲ್ಲಿಕಾರ್ಜುನ ಖರ್ಗೆ ಉಲ್ಟಾ ಹೊಡೆದಿದ್ದಾರೆ.
ಮೋದಿ ಎಂದರೆ ಬಿಜೆಪಿ ಎಂದರ್ಥವಾಗಿದೆ. ಬಿಜೆಪಿ ಹಾವು ಇದ್ದಂಗೆ. ಸ್ವಲ್ಪ ನೆಕ್ಕಿ ನೋಡುತ್ತೇವೆ ಅಂದರೆ ಅಲ್ಟಿಮೆಟ್ಲಿ ಡೆತ್ ಅಂತ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ಮೋದಿಯವರ ಬಗ್ಗೆ ಹೇಳಿಲ್ಲ. ವೈಯಕ್ತಿಕವಾಗಿ ನಾವು ಯಾರ ಬಗ್ಗೆಯೂ ಹೇಳುವುದಿಲ್ಲ. ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ. ಬಿಜೆಪಿ ಸಿದ್ಧಾಂತ ಒಂದು ವಿಷದಂತಿದೆ ಎಂದು ತಿಳಿಸಿದ್ದಾಗಿ ಹೇಳಿದರು.