ಮೊಬೈಲ್ ರಕ್ತ ಸಂಗ್ರಹಣೆ ವಾಹನಕ್ಕೆ ಚಾಲನೆ

ಮಂಡ್ಯ.ಮೇ.25:- ಐ.ಸಿ.ಐ.ಸಿ.ಐ ಬ್ಯಾಂಕ್ ಸಿ.ಎಸ್.ಆರ್ ಯೋಜನೆಯಡಿ 37 ಲಕ್ಷ ವೆಚ್ಚದ ಮೊಬೈಲ್ ರಕ್ತ ಸಂಗ್ರಹಣೆ ವಾಹನವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಿಮ್ಸ್ ಕಾಲೇಜಿಗೆ ಹಸ್ತಾಂತರಿಸಿ ಚಾಲನೆ ನೀಡಲಾಯಿತು.
ವಿಶೇಷ ವಾಹನವನ್ನು ವೀಕ್ಷಿಸಿ ವಾಹನಕ್ಕೆ ಚಾಲನೆ ಕೊಟ್ಟ ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಜಿಲ್ಲಾಡಳಿತಕ್ಕೆ ಐಸಿಐಸಿಐ ಬ್ಯಾಂಕ್ ಅವರು ವಿಶೇಷ ವಾಹನವನ್ನು ನೀಡಿದ್ದಾರೆ. ವಾಹನವು ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಹೊಂದಿದ್ದು, ರಕ್ತ ಸಂಗ್ರಹಣೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜಿರೇಟರ್, ರಕ್ತದಾನಿಗಳು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಮನವಿ ಮಾಡಿದರು.
ರಕ್ತದಾನ ಶಿಬಿರವನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು. ಮೊಬೈಲ್ ರಕ್ತ ಸಂಗ್ರಹಣಾ ವಾಹನವನ್ನು ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರವನ್ನು ಗ್ರಾಮ ಮಟ್ಟದಲ್ಲೂ ಆಯೋಜಿಸಬಹುದು ಎಂದರು.
ಐಸಿಐಸಿಐ ಬ್ಯಾಂಕ್‍ನ ಅಧಿಕಾರಿ ವೆಂಕಟೇಶ ಬಿ.ಕೆ ಅವರು ಮಾತನಾಡಿ ಸಿ.ಎಸ್.ಆರ್ ಯೋಜನೆಯಡಿ ಮೊಬೈಲ್ ರಕ್ತ ಸಂಗ್ರಹಣೆ ವಾಹವನ್ನು ಜಿಲ್ಲಾ ಮೆಡಿಕಲ್ ಕಾಲೇಜಿಗೆ ನೀಡಲಾಗಿದೆ. ಇದರಿಂದ ಮಂಡ್ಯ ಜಿಲ್ಲೆಗೆ ಅನುಕೂಲವಾಗುತ್ತದೆ. ರಕ್ತದ ಅವಶ್ಯಕತೆ ಇದ್ದವರಿಗೆ ಸ್ಪಂದಿಸಲು ಸಹಾಯಕವಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ರಕ್ತದಾನದ ಶಿಬಿರಗಳನ್ನು ಮಾಡಿದಾಗ ರಕ್ತವನ್ನು ಸಂಗ್ರಹಿಸಿಟ್ಟುಕೊಂಡು ಬರುವುದು ತುಂಬಾ ಮುಖ್ಯವಾಗುತ್ತದೆ. ಈ ಕೆಲಸಕ್ಕೆ ವಾಹನವು ತುಂಬಾ ಅವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು, ಮಿಮ್ಸ್ ನಿರ್ದೇಶಕ ಡಾ.ಮಹೇಂದ್ರ, ಮೆಡಿಕಲ್ ಸುಪರಿಡೆಂಟ್ ಡಾ.ಶ್ರೀಧರ್, ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಮುರಳೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.