
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ24: ವಿಜಯನಗರ ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮುಖ್ಯಸ್ಥರು ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆಯನನು ಮಾಡಿಕೊಂಡಿ ಮೇ 29 ರಿಂದ ಶಾಲೆಯನ್ನು ಆರಂಭಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು 2023-24ನೇ ಶೈಕ್ಷಣಿಕ ವರ್ಷಾರಂಭವನ್ನು ಅದ್ದೂರಿಯಾಗಿ ಅನೇಕ ಹಂತದ ಕಾರ್ಯಗಳ ಮೂಲಕ ಆರಂಭಿಸಬೇಕಾಗಿದೆ. ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಪಾಲಕ ಪೋಷಕರ ಸಹಕಾರದೊಂದಿಗೆ ಕಾಯೋನ್ಮುಖರಾಗುವಂತೆ ತಿಳಿಸಿದ್ದಾರೆ. ಈಗಾಗಲೇ ಎಲ್ಲಾ ಸರ್ಕಾರಿ ಶಾಲೆಗಳಿಗೆ ಪಠ್ಯ-ಪುಸ್ತಕಗಳನ್ನು ವಿತರಿಸಲಾಗಿದ್ದು ಮೊದಲ ದಿನವೆ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.
ಮೇ29 ರಂದು ಶಾಲೆಗಳು ಆರಂಭವಾಗಬೇಕಾಗಿದ್ದು ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಶಾಲಾ ಪರಿಸರವನ್ನು ಶುಭ್ರಗೊಳಿಸುವುದು, ಅಡುಗೆ ಕೊಣೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆಯನ್ನು ಸರಿಪಡಿಸುವುದು, ಶಾಲೆಯ ವಾತಾವರಣವನ್ನು ತಳಿರು-ತೋರಣಗಳಿಂದ ಅಲಂಕರಿಸುವುದು, ಶಾಲಾರಂಭವನ್ನು ಸಿಹಿ ಹಂಚಿಕೆಯೊಂದಿಗೆ ಪಠ್ಯ-ಪುಸ್ತಕ ಸಮವಸ್ತ್ರಗಳನ್ನು ವಿತರಣೆ ಮಾಡುವುದು, ಎಸ್ಡಿಎಂಸಿ, ಜನಪ್ರತಿನಿಧಿಗಳು, ಪಾಲಕ-ಪೊಷಕರನ್ನು ಅಂದು ಶಾಲೆಗೆ ಆಹ್ವಾನಿಸುವುದು ಆರಂಭಕ್ಕೂ ಪೂರ್ವದಲ್ಲಿ ಮಾಹಿತಿಗೆ ಡಂಗುರ ಹಾಕಿಸುವುದು, ಕರಪತ್ರ ವಿತರಿಸುವುದು ಸೇರಿದಂತೆ 1ನೇ ತರಗತಿಯ ದಾಖಲಾತಿಯನ್ನು ಅಂಗನವಾಡಿಗಳಿಂದ ಪಡೆದು ದಾಖಲಿಸು ಹಾಗೂ ಆರಂಭಕ್ಕೆ ಮಾಧ್ಯಮಗಳು ಸೇರಿದಂತೆ ಎಲ್ಲರನ್ನು ಪಾಲ್ಗೊಳುವಂತೆ ಮಾಡುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ನಿರ್ವಹಿಸಿ ಶೈಕ್ಷಣಿಕ ವರ್ಷಾರಂಭಕ್ಕೆ ಅಣಿಯಾಗುವಂತೆ ತಿಳಿಸಿದ್ದಾರೆ.