
ಎನ್.ವೀರಭದ್ರಗೌಡ
* ಜಿಲ್ಲೆಯ 1 ಲಕ್ಷಕ್ಕೂ ಹೆಚ್ಚು ಎಕರೆಯಲ್ಲಿ ಮೆಣಸಿನಕಾಯಿ ಬೆಳೆ.
* 23 ಲಕ್ಷ ಕ್ವಿಂಟಲ್ ಇಳುವರಿ.
* ಮಾರಾಟಕ್ಕಾಗಿ ಬ್ಯಾಡಗಿ ಮಾರುಕಟ್ಟೆ.
* ಮಾರುಕಟ್ಟೆಗಾಗಿ 23.25 ಎಕರೆ ಜಮೀನು ಖರೀದಿ.
* ಖಾಸಗಿ ಸಹಭಾಗಿತ್ವದ ಮಾರುಕಟ್ಟೆ ನಿರ್ಮಾಣಕ್ಕೆ ಬಾರದ ಉದ್ಯಮಿಗಳು.
* ಮಾರುಕಟ್ಟಿ ನಿರ್ಮಾಣಕ್ಕೆ ಮತ್ತೆ ಮತ್ತೆ ಮನವಿ.
ಬಳ್ಳಾರಿ, ಸೆ.02: ಜಿಲ್ಲೆಯಲ್ಲಿ ಯಥೇಚ್ಚವಾಗಿ ಬೆಳೆಯುವ ಮೆಣಸಿನಕಾಯಿ ಬೆಳೆಯ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ಮಾಡಬೇಕೆಂಬ ಯೋಜನೆ ದೂ…ರಾ ದೂರಾ ಸಾಗುತ್ತಿದೆ ಹೊರೆತು. ಮಾರುಕಟ್ಟೆ ಮಾಡಬೇಕೆಂಬ ರೈತರು ಮನವಿ ಸಲ್ಲುಸುವುದು ಮಾತ್ರ ತಪ್ಪುತ್ತಿಲ್ಲ.
ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಒಂದಾಗಿ ಜಿಲ್ಲೆಯಲ್ಲಿ 1980 ರಿಂದೀಚೆಗೆ ಮೆಣಸಿನಕಾಯಿ ಬೆಳೆ ಹೆಚ್ಚಾಗಿ ಬೆಳೆಯಲು ಶುರುವಾಯ್ತು. ಈಗ ಈ ಪ್ರದೇಶದ ಜಿಲ್ಲೆಯಲ್ಲಿ 1.18 ಲಕ್ಷ ಎಕರೆಗೂ ಹೆಚ್ಚು ವಿಸ್ತರಿಸಿದೆ. ವಾರ್ಷಿಕ 20 ರಿಂದ 25 ಲಕ್ಷ ಕ್ವಿಂಟಲ್ ಬೆಳೆ ಬೆಳೆಯಲಾಗುತ್ತದೆ.
ಇಲ್ಲಿ ಬೆಳೆದ ಮೆಣಸಿನ ಕಾಯಿ ಬೆಳೆಯನ್ನು ರೈತರು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಇಲ್ಲಿಯೇ ಒಂದಿಷ್ಟು ಮಾರಾಟ ಮಾಡಿದರೂ. ಹೆಚ್ಚಾಗಿ ಬ್ಯಾಡಗಿ ಮಾರುಕಟ್ಟೆಯನ್ನೇ ಆಶ್ರಯಿಸಬೇಕಿದೆ. ಇಲ್ಲಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರ ಜೊತೆಗೆ ರಸ್ತೆ ಅವಘಡಗಳು, ಪೊಲೀಸರ ಕಿರಿಕಿರಿ, ಅಲ್ಲಿನ ಮಾರುಕಟ್ಟೆಯಲ್ಲಿ ಒತ್ತಡ ಮೊದಲಾದವನ್ನು ರೈತರು ಎದುರಿಸಬೇಕಿದೆ. ಅದಕ್ಕಾಗಿ ಬಳ್ಳಾರಿಯಲ್ಲಿಯೇ ಮಾರುಕಟ್ಟೆ ಮಾಡಲು 2021-22 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಮಾಡಲು 23.25 ಎಕರೆ ಜಮೀನನ್ನು ಸರ್ಕಾರದ ನಿರ್ದೇಶನದಂತೆ
2.24 ರೂಗಳಿಗೆ ಜಮೀನನ್ನು ಖರೀದಿಸಿದೆ.
ಇಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ-ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಲು 2002 ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಟೆಂಡರ್ ಕರೆಯಲಾಗಿತ್ತು. ಯಾರೂ ಟೆಂಡರ್ನಲ್ಲಿ ಭಾಗವಹಿಸಲಿಲ್ಲ.
ಮಾರುಕಟ್ಟೆಯನ್ನು ಅದಾಷ್ಟು ಬೇಗನೆ ಸ್ಥಾಪಿಸದೇ ಇದ್ದಲ್ಲಿ ರೈತರಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಮಾರುಕಟ್ಟೆಯನ್ನು ಸ್ಥಾಪಿಸುವುದು ಅತ್ಯಾವಶ್ಯಕವಾಗಿರುವುದರಿಂದ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದಾದರೊಂದು ಅನುದಾನದಡಿಯಲ್ಲಿ ಮಾರುಕಟ್ಟೆ ನಿರ್ಮಿಸಲು. ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ಸ್ಥಳೀಯ ಎಪಿಎಂಸಿ ಕಾರ್ಯದರ್ಶಿಗಳ ಪತ್ರ ಬರೆದು ಕೂತಿದ್ದಾರೆ. ಇದಕ್ಕೆ ಊ ಇಲ್ಲ, ಹೂಹೂ ಇಲ್ಲ.
ಆದರೆ ರೈತರು, ರೈತ ಸಂಘಟನೆಗಳು ಆಯ್ಕೆಯಾದ ಜನ ಪ್ರತಿನಿಧಿಗಳಿಗೆ, ಬಂದಂತಹ ಅಧಿಕಾರಿಗಳಿಗೆ ಮನವಿ ನೀಡುವುದು ಮಾತ್ರ ತಪ್ಪುತ್ತಿಲ್ಲ.
ಮೆಣಸಿನಕಾಯಿ ಮಾರುಕಟ್ಟೆ ಪಿಪಿಪಿ ಮಾಡೆಲ್ ನಲ್ಲಿ ಮಾಡುವ ಉದ್ದೇಶ ಇದೆ. ಆದರೆ ಉದ್ಯಮಿಗಳ ಆಸಕ್ತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚರ್ಚಿಸಿದ್ದು ದೊಡ್ಡ ಮಟ್ಟದಲ್ಲಿ ಮಾಡಲು ಚಿಂತನೆ ನಡೆಸಿದ್ದಾರೆ.
ನಂಜುಂಡಸ್ವಾಮಿ
ಕಾರ್ಯದರ್ಶಿ, ಎಪಿಎಂಸಿ.ಬಳ್ಳಾರಿ.
ರೈತರು ಇಲ್ಲಿಬೆಳೆದ ಬೆಳೆಯನ್ನು ದೂರದ ಬ್ಯಾಡಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಎದುರಿಸುವ ಸಮಸ್ಯೆ ನಿವಾರಣೆಗೆ ಇಲ್ಲಿಯೇ ಮಾರುಕಟ್ಟೆ ನಿರ್ಮಿಸುವುದು ಅವಶ್ಯ ಇದೆ.
ಮಾನ್ಯಂ ಶ್ರೀಧರ್, ಜಿಲ್ಲಾ ಅಧ್ಯಕ್ಷರು. ಕಾಂಗ್ರೆಸ್ ಕಿಸಾನ್ ಸೆಲ್.ಬಳ್ಳಾರಿ.