
ಚಿತ್ರದುರ್ಗ. ಮಾ.೧೧:ಸಮಾಜದಲ್ಲಿ ಬೆಳೆಯುತ್ತಿರುವ ಮೂಡಾಚಾರಾ ಕಂದಾಚಾರಗಳನ್ನು ತೊಲಗಿಸಲು ವಿಜ್ಞಾನ ಅಗತ್ಯವಾಗಿದೆ, ಜನರನ್ನು ಶೋಷಿಸಿ ತೊಂದರೆಗೀಡು ಮಾಡುತ್ತಿರುವ ಕಂದಾಚಾರಗಳನ್ನು ಬುಡಮಟ್ಟದಲ್ಲಿ ತೆಗೆದುಹಾಕಲು ವಿಜ್ಞಾನಿಗಳು, ವಿಜ್ಞಾನ ತಿಳುವಳಿಕೆ ಉಳ್ಳವರು, ಸಮಾಜ ಸುಧಾರಕರು ಪ್ರಯತ್ನಿಸಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ಯವರು ಕರೆ ನೀಡಿದರು.ಅವರು ಚಿತ್ರ ನಗರದ ಸೀಕೆಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ಸಂಸ್ಥಾಪಕ ದಿನಾಚರಣೆಯ ಪ್ರಯುಕ್ತ ಮಾತನಾಡುತ್ತಿದ್ದರು.ಈಗಲೂ ಸಹ ಭಾನುಮತಿ, ಕಂದಾಚಾರಗಳು ಗ್ರಾಮೀಣ ಜನರಲ್ಲಿ ಮನೆ ಮಾಡಿಕೊಂಡು ಅವರ ದಿನನಿತ್ಯದ ಕಾಯಕಗಳಿಗೆ ತೊಂದರೆ ಉಂಟು ಮಾಡುತ್ತಿದೆ, ವಿದ್ಯಾರ್ಥಿನಿಯರ ಪರೀಕ್ಷಾ ಪ್ರವೇಶ ಪತ್ರಿಕೆ ಸಹ ತನ್ನಿಂದ ತಾನೇ ಹರಿದು ಹೋಗುತ್ತದೆ, ಸುಟ್ಟುಕೊಳ್ಳುತ್ತದೆ ಎಂಬುದನ್ನ ಈಗಲೂ ಸಹ ಪ್ರಚಲಿತವಾಗಿರುವುದು ಶೋಚನೀಯ. ಅವುಗಳನ್ನ ವಿಜ್ಞಾನದ ಮುಖಾಂತರ ಬಗೆಹರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೋಟರಾಕ್ಟ್, ಸರ್ಕಾರಿ ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿನಿ ಎಚ್ ಎಸ್ ರಚನಾ ಮಕ್ಕಳಿಗೆ ವಿಜ್ಞಾನ ಗೀತೆಗಳು ಹಾಡಿ ಮನರಂಜಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಲಕ್ಷ್ಮಿ, ಸಹಶಿಕ್ಷಕರಾದ ಧನಲಕ್ಷ್ಮಿ, ಮಂಜುಳ, ಇನ್ನಿತರ ಶಿಕ್ಷಕರು ಭಾಗವಹಿಸಿದ್ದರು.