
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ಕಳೆದ ಮೂರು ದಿನಗಳಿಂದ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಮತ್ತು ದುರಸ್ತಿ, ಕಾರ್ಯದ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡರಸುತ್ತಿದ್ದ ಆಹೋರಾತ್ರಿ ಧರಣಿ ಪ್ರತಿಭಟನೆಯ ಮುಷ್ಕರವನ್ನು ಇಂದು ಹಿಂದಕ್ಕೆ ಪಡೆದಿದ್ದಾರೆ.
ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದಿಂದ ಈ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿತ್ತು.ನೀರು ಸರಬರಾಜು ಮತ್ತು ದುರಸ್ತಿ ಕಾರ್ಮಿಕರ, ಸಂಘದಿಂದ 131 ಜನ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು ಇದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ಕಳೆದ 20 ವರ್ಷಗಳಿಂದ ನಗರಸಭೆ ಮತ್ತು ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಲೇ ಇದ್ದೇವೆ. ಕಳೆದ ಹಲವು ದಿನಗಳಿಂದ ನೇರ ನೇಮಕಾತಿ ಮತ್ತು ನೇರವೇತನ ನೌ ಕರರ ನೇಮಕಕ್ಕೆ ಆದೇಶ ಹೊರಡಿಸಿದ್ದಾರೆ. ಆದರೆ ನಮ್ಮನ್ನು ಮಾತ್ರ ನೌಕರಿಯಿಂದ ವಂಚಿತರನ್ನಾಗಿ ಮಾಡಲಾಗಿದೆ.
ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ರ ನಡುವೆ ತಾರತಮ್ಯ ಉಂಟುಮಾಡುತ್ತಿರುವುದು ಬೇಸರದ ಸಂಗತಿ. ಈ ಬಾರಿಯ ಅಧಿವೇಶನದಲ್ಲಿ ನಮ್ಮ ಬೇಡಿಕೆ ಇತ್ತು. ಆದರೆ ಸರ್ಕಾರವು ನಮ್ಮ ಬೇಡಿಕೆ ಈಡೇರಿಸಿಲ್ಲ ಎಂದು ಮುಷ್ಕರ ನಡೆಸಿದ್ದರು.
ಅದಕ್ಕಾಗಿ ಇಂದು ನಗರ ಶಾಸಕ ಸೋಮಶೇಖರ ರೆಡ್ಡಿ, ಪಾಲಿಕೆ ಆಯುಕ್ತ ರುದ್ರೇಶ್ ಅವರು ಬಂದು ಸರ್ಕಾರ ಇನ್ನು ಮುಂದೆ ನಿಮಗೆ ನೇರವಾಗಿ ಪಾಲಿಕೆಯಿಂದಲೇ ವೇತನ ಪಾವತಿ ಮಾಡಲಿದೆ ಮಧ್ಯವರ್ತಿಗಳು ಇರುವುದಿಲ್ಲ ಎಂದು ಮುಖ್ಯ ಮಂತ್ರಿಗಳು ಭರವಶೆ ನೀಡಿದ್ದು. ಕೆಲ ದಿನಗಳಲ್ಲಿ ಈಕುರಿತು ಆದೇಶ ನೀಡಲಿದೆ. ಮುಷ್ಕರ ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಕ್ಕೆ ಮುಷ್ಕರ ಹಿಂಪಡೆದಿದೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಗೋಪಿ ತಿಳಿಸಿದ್ದಾರೆ.
ಮುಷ್ಕರದ ಸ್ಥಳಕ್ಕೆ ನಂತರ ಮೇಯರ್ ರಾಜೇಶ್ವರಿ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಮೊದಲಾದವರು ಆಗಮಿಸಿ ನಿಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ನಿಮ್ಮ ಹೋರಾಟಕ್ಕೆ ನಮ್ಮಬೆಂಬಲವಿದೆಂದು ತಿಳಿಸಿದರು.
ಎಐಟಿಯುಸಿನ ಮುಖಂಡ ಜೆ.ಸತ್ಯಬಾಬು ಆಮ್ಮ ಆದ್ಮಿ ಪಕ್ಷದ ಎರ್ರಿಸ್ವಾಮಿ ಇದ್ದರು.