ಮುಂಬರುವ ದಿನಗಳಲ್ಲಿ ಕುಸ್ತಿ ಉತ್ಸವ ಅದ್ದೂರಿಯಾಗಿಆಯೋಜಿಸಲಾಗುವದು: ಶಾಸಕ ಶರಣು ಸಲಗರ

ಬೀದರ,ಮಾ.13 : ಮೊದಲ ಸಲ ಕುಸ್ತಿ ಉತ್ಸವ ಬಸವ ಉತ್ಸವದಲ್ಲಿ ಆಯೋಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತದೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದರು.

ಅವರು ರವಿವಾರ ಬಸವ ಉತ್ಸವ-2023 ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಸವ ಉತ್ಸವದಲ್ಲಿ ಮೊದಲ ಬಾರಿಗೆ ಕುಸ್ತಿ ಉತ್ಸವ, ಹೆಲಿಕಾಪ್ಟರ್ ಉತ್ಸವ ಮತ್ತು ಬೋಟಿಂಗ್ ಉತ್ಸವವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಇವುಗಳ ಆನಂದವನ್ನು ಸವಿಯಬೇಕು ಮತ್ತು ಇದರ ಹೊರತಾಗಿ ಇತರೆ ಹಲವಾರು ಉತ್ಸವಗಳನ್ನು ಆಯೋಜಿಸಲಾಗಿದೆ. ಇಂದು ಸಂಜೆಯು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹೆಚ್ಚಿನ ಜನರು ಇದರಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಈ ಕುಸ್ತಿ ಉತ್ಸವದಲ್ಲಿ ಸೌತ್ ಎಷಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಬಸವಕಲ್ಯಾಣದ ಕೊಹಿನೂರ್ ಗ್ರಾಮದ ಅಂತರಾಷ್ಟ್ರೀಯ ಕುಸ್ತಿ ಕ್ರೀಡಾಪಟು ಉಮೇಶ್ ಜಮಾದಾರ ಹಾಗೂ ಅನೇಕ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಕುಸ್ತಿಪಟುಗಳು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಸುಮಾರ 100ಕ್ಕೂ ಹೆಚ್ಚು ಕುಸ್ತಿ ಪಟುಗಳು ಈ ಕುಸ್ತಿ ಉತ್ಸವದಲ್ಲಿ ಭಾಗವಹಿದರು.

ಪ್ರಥಮ ಬಹುಮಾನ 51 ಸಾವಿರ ರೂಪಾಯಿ ಜೊತೆಗೆ ಬೆಳ್ಳಿ ಗಧೆಯನ್ನು ಸಿದ್ದು ಬೆಳಮಗಿ ಅವರು ವಿಜೇತರಾಗುವ ಮೂಲಕ ಪಡೆದರು, 11 ಸಾವಿರ ವಿಭಾಗದಲ್ಲಿ ಉಮೇಶ್ ಜಮಾದಾರ ಅವರು ಬಹುಮಾನ ಪಡೆದರು. 8 ಮತ್ತು 10 ಸಾವಿರ ರೂಪಾಯಿಗಳ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಕೆಲವೊಂದು ಕುಸ್ತಿ ಪಟುಗಳು ಹಲವಾರು ನಿಮಿಷಗಳ ಕಾಲ ಸಮಬಲ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಕಾತುರದಿಂದ ಕಾಯುವಂತೆ ಮಾಡಿದರು. ಕೆಲವು ಕುಸ್ತಿ ಪಟುಗಳು ಕೆಲವೇ ನಿಮಿಷಗಳಲ್ಲಿ ಎದುರಾಳಿಯನ್ನು ಚಿತ್ತು ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಒಟ್ಟಾರೆಯಾಗಿ ವಿವಿಧ ಆಕರ್ಷಕ ಮೈಕಟ್ಟು ಮತ್ತು ದೇಹಧಾಡ್ಯ ಹೊಂದಿರುವ ಕುಸ್ತಿ ಪಟುಗಳು ಕುಸ್ತಿ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದರು.

ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರಾದ ರಮೇಶ ಕೋಲಾರ, ಬಸವಕಲ್ಯಾಣ ತಹಸೀಲ್ದಾರ ಶಾಂತಗೌಡ ಬಿರಾದಾರ, ಬಸವಕಲ್ಯಾಣ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ.ಹಳ್ಳದ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ ಕುಸ್ತಿಪಟುಗಳು, ಕುಸ್ತಿ ಅಭಿಮಾನಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.