ಮುಂಜಾಗ್ರತೆ ವಹಿಸಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ

ಕಲಬುರಗಿ,ಫೆ,10: ಮಾನವನ ದೇಹದ ಪ್ರಮುಖ ಭಾಗವಾದ ಕಿಡ್ನಿಗೆ ವಿವಿಧ ರೀತಿಯಿಂದ ತೊಂದರೆಯಾಗುತ್ತದೆ. ನಿರಂತರ ಆಯಾಸ, ನಿದ್ರೆಯ ತೊಂದರೆ, ಒಣಗಿದ ಚರ್ಮ, ಮೂತ್ರದಲ್ಲಿ ಉರಿಯೂತ ಮತ್ತು ರಕ್ತಪಾತ, ಸ್ನಾಯು ಸೆಳೆತದಂತಹ ಲಕ್ಷಣಗಳು ಕಿಡ್ನಿಯ ತೊಂದರೆಯನ್ನು ಸೂಚಿಸುತ್ತವೆ. ಆಗ ನಿರ್ಲಕ್ಷ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕಿಡ್ನಿಯನ್ನು ರಕ್ಷಿಕೊಳ್ಳಬೇಕೆಂದು ವೈದ್ಯರಾದ ಡಾ.ಶಿವಶಂಕರ ಬಿರಾದಾರ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿನ ಬಿರಾದಾರ ಕಾಂಪೆಕ್ಸ್‍ನಲ್ಲಿರುವ ‘ಪ್ರೀತಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಕಿಡ್ನಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಕ್ತದಲ್ಲಿ ಸಕ್ಕರೆ ಪ್ರಮಾಣ ನಿರ್ವಹಣೆ, ರಕ್ತ ಒತ್ತಡ ನಿರ್ವಹಣೆ, ಸೂಕ್ತ ತೂಕ ಕಾಪಾಡಿಕೊಳ್ಳುವುದು, ಸಮತೋಲಿತ ಆಹಾರದ ಸೇವನೆ, ಯತೇಚ್ಛವಾಗಿ ನೀರು ಕುಡಿಯುವುದು, ಉಪ್ಪು, ಹುಳಿ, ಖಾರದ ಸೇವನೆ ಕಡಿಮೆಗೊಳಿಸುವುದು, ಆಲ್ಕೋಹಾಲ್, ಧೂಮಪಾನ ಸೇವಿಸದಿರುವುದು, ನಿಯಮಿತ ವ್ಯಾಯಾಮ ಮಾಡುವುದು, ಒತ್ತಡ ರಹಿತ ಈವನ ಪದ್ದತಿ ಅಳವಡಿಕೆಯಂತಹ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಿಡ್ನಿಗೆ ಸಮಸ್ಯೆಯಾಗದಂತೆ ಕಾಪಾಡಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯ್ಯ ಹಿರೇಮಠ, ಶರಣಬಸಪ್ಪ ಕರ್ಜಗಿ, ಅಂಬಾರಾವ ಪಾಟೀಲ, ಸಂತೋಷ ದಿಕ್ಸಂಗಿ, ಕ್ಷೇಮಲಿಂಗ ಬಿರಾದಾರ, ಮಹಾಂತಪ್ಪ ಕುಂಬಾರ ಸೇರಿದಂತೆ ಮತ್ತಿತರರಿದ್ದರು.