ಮುಂಗಾರು ಮಳೆ ವಿಫಲ ಬೆಳೆ ನಷ್ಟ ಪರಿಹಾರ ನೀಡಲು  ಆಗ್ರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.06: ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯಿಂದ  ಇಂದು ಡಿಸಿ ಕಚೇರಿ ಆವರಣದಲ್ಲಿ.  ಮುಂಗಾರು ಮಳೆ ಬಾರದ ಹಿನ್ನಲೆಯಲ್ಲಿ  ರೈತರು ಎದಿರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿ  ಜಿಲ್ಲಾಧಿಕಾರಿಗಳ ಮುಂಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ  ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ,  ರಾಜ್ಯದ ಹಲವಡೆ ಮಳೆ ಬೀಳುತ್ತಿದ್ದರೂ,  ಬಹುತೇಕ ಕಡೆ ಮುಂಗಾರು ಮಳೆ ವಿಫಲವಾಗಿದ್ದು, ಇದರಿಂದ  ಬಿತ್ತನೆ ಮಾಡಲು ಭೂಮಿಯಲ್ಲಿ ಅವಶ್ಯಕ ತೇವಾಂಶ ಇಲ್ಲ. ಇನ್ನು ಕೆಲವು ಪ್ರದೇಶಗಳಲ್ಲಿ  ಇರುವ ತೇವಾಂಶದಲ್ಲಿ ಬಿತ್ತನೆ ಮಾಡಿ ರೈತರು ಮಳೆಯ ನಿರೀಕ್ಷೆಯಲ್ಲಿ ಆಕಾಶ ದತ್ತ ಮುಖ ಮಾಡಿದ್ದಾರೆ.
ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿ ಹೊಲ,ಗದ್ದೆಗಳಲ್ಲಿ ಪೈರು ಬರುವ ಸಮಯವಾದರೂ ಸೂಕ್ತ ಸಮಯದಲ್ಲಿ ಮಳೆಯಾಗದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ.
ಹಾಗಾಗಿ, ಕೆಲವು ಪ್ರದೇಶದಲ್ಲಿ ಅಲ್ಪ ಸ್ವಲ್ಪ ಚಿಗುರೊಡೆದಿರುವ ಪೈರುಗಳು ಸಹ ಕ್ರಮೇಣವಾಗಿ ಒಣಗುತ್ತಿದೆ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಒಣ ಬರ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಹಜವಾಗಿ ಅಂತಹ ಪರಿಸ್ಥಿತಿಯನ್ನು ಎದುರಿಸಲು ಅವಶ್ಯಕ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಇನ್ನು ಈಗಾಗಲೇ ಬಿತ್ತನೆ ಬೀಜ,ಔಷಧಿ ಇನ್ನಿತರ ಖರ್ಚಿಗಾಗಿ ಸಾಲ ಮಾಡಿರುವ ರೈತರು ಹೈರಾಣಾಗಿದ್ದಾರೆ.ಸಹಜವಾಗಿಯೇ ಅವರ ಬದುಕು ತೀವ್ರ ಕಷ್ಟದಲ್ಲಿದೆ.
ಇಂತಹ ಸಂಧರ್ಭದಲ್ಲಿ  ರೈತರಿಗೆ ಆಸರೆಯಾಗಿ ಸರ್ಕಾರವು ನಿಂತು ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಅಂದರೆ ಬೆಳೆ ನಷ್ಟ ಪರಿಹಾರ ನೀಡುವುದು, ನರೇಗಾ ಯೋಜನೆಯಡಿಯಲ್ಲಿ ವರ್ಷ ಪೂರ್ತಿ ಉದ್ಯೋಗ ನೀಡುವುದು, ರೈತರ ಸಾಲ ಮನ್ನಾ ಮಾಡುವುದು, ಕಾರ್ಖಾನೆಗಳನ್ನು ತೆರೆದು ಉದ್ಯೋಗ ಸೃಷ್ಟಿಸುವುದು,ಪ್ರತಿ ಕುಟುಂಬಕ್ಕೆ ಅವಶ್ಯಕವಿರುವಷ್ಟು ಪಡಿತರ ನೀಡುವುದು,ಕೆರೆ ಕಟ್ಟೆಗಳ ಹೂಳೆತ್ತುವುದು, ನೀರಾವರಿ ಕಾಮಗಾರಿ ಸೇರಿದಂತೆ ಇನ್ನಿತರ ಜನ ಕಲ್ಯಾಣ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ.  ಕೂಡಲೇ ರಾಜ್ಯ ಸರ್ಕಾರ ಈ ಕಾರ್ಯಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ,  ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಮಾತನಾಡಿದರು, ಜಿಲ್ಲಾ ಸಮಿತಿ ಸದಸ್ಯ  ನಿಂಗಪ್ಪ, ರೈತರಾದ  ಹುಲುಗಪ್ಪ, ಧನರಾಜ್, ಬಸವರಾಜ, ಶೇಕ್ಷಾವಲಿ, ಎಚ್.ತಿಪ್ಪಣ್ಣ ಸೇರಿದಂತೆ ಇತರರು ಇದ್ದರು

One attachment • Scanned by Gmail