ಚಿತ್ತಾಪುರ: ಮಾ.27:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರಕಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ಪ್ರಕಟಿಸಿರುವುದನ್ನು ಹಾಗೂ ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳು ಮತ್ತು ಒಕ್ಕಲಿಗರು ಹಾಗೂ ಒಳ ಪಂಗಡಗಳಿಗೆ ಮೀಸಲಾತಿ ಸೌಲಭ್ಯ ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರ ಮೂವತ್ತು ವರ್ಷಗಳಿಂದಲೂ ಇದೆ ಕಾಂಗ್ರೆಸ್ ಸರಕಾರ ಅಶ್ವಾಸನೆ ಕೊಡುತ್ತಾ ಮೂಗಿಗೆ ತುಪ್ಪ ಸವರಿಕೊಂಡು ಬಂದಿತ್ತು. ಆದರೆ ಇಂದು ಕಾಂಗ್ರೆಸ್ ಸರಕಾರದಿಂದ ಆಗಲಾರದ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಬಿಜೆಪಿ ಸರಕಾರ ಮಾಡಿ ತೋರಿಸಿದೆ ಎಂದು ಹೇಳಿದ್ದಾರೆ. ಪರಿಶಿಷ್ಟ ಜಾತಿಯ ಒಳಗಿರುವ ಅನೇಕ ಉಪಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯಿಲ್ಲದೇ ಎಲ್ಲರಿಗೂ ಅನ್ಯಾಯವಾಗುತ್ತಿತ್ತು. ಅದಕ್ಕಾಗಿ ರಾಜ್ಯದಲ್ಲಿ ಜನಸಂಖ್ಯೆಗೆ ಆಧಾರವಾಗಿ ಪರಿಶಿಷ್ಟ ಜಾತಿಯಲ್ಲೇ ಇರುವ ಉಪ ಜಾತಿಗಳನ್ನು ವರ್ಗೀಕರಿಸಿ ಮೀಸಲಾತಿ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು ಅದಕ್ಕೆ ಸಂಬಂಧಿಸದಂತೆ ನೂರಾರು ಚಳುವಳಿಗಳು, ಪ್ರತಿಭಟನೆಗಳು ಮತ್ತು ಸತ್ಯಾಗ್ರಹಗಳು ನಡೆದಿದ್ದವು ಎಂದರು.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವುದು ಸವಾಲಿನ ಕೆಲಸವಾಗಿತ್ತು. ಸದಾಶಿವ ಆಯೋಗದ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವು ಸಮರ್ಥವಾಗಿ ಜಾರಿ ಮಾಡಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಎಡಗೈ ಸಮುದಾಯಕ್ಕೆ ಶೇ.6 ರಷ್ಟು, ಬಲಗೈ ಸಮುದಾಯಕ್ಕೆ ಶೇ.5.5 ರಷ್ಟು, ಭೋವಿ, ಬಂಜಾರಾ ಸಮುದಾಯಗಳಿಗೆ ಶೇ.4.5 ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಶೇ.1 ರಷ್ಟು ಮೀಸಲು ಜಾರಿ ಮಾಡಿರುವುದು ಶ್ಲಾಘನೀಯ ಎಂದರು
2ಸಿ ಅಡಿ ಒಕ್ಕಲಿಗರಿಗೆ ಶೇ.6 ರಷ್ಟು ಮೀಸಲಾತಿ ಹಾಗೂ 2ಡಿ ಅಡಿ ಲಿಂಗಾಯತ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ನೀಡುವ ಮೂಲಕ ಈ ಸಮಾಜವು ಎರಡು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸರಕಾರ ತಾರ್ಕಿಕ ಅಂತ್ಯವನ್ನು ನೀಡಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಮೀಸಲಾತಿ ಸೌಲಭ್ಯವು ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
———————
“ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ, ಬಹುದಿನಗಳ ಬೇಡಿಕೆ ಈಡೇರಿಸಿದ ರಾಜ್ಯ ಸರಕಾರಕ್ಕೆ ಧನ್ಯವಾದಗಳು”
-ದೀಪಕ್ ಹೊಸ್ಸುರಕರ್ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷರು.
“ಪರಿಶಿಷ್ಟ ಜಾತಿಯ ಮೀಸಲಾತಿ ವಿಚಾರವನ್ನು ಚುನಾವಣೆ ಬಂದಾಗ ಮಾತ್ರ ಪ್ರಸ್ತಾಪಿಸಿ ನಂತರ ಮರೆತು ಬಿಡುತ್ತಿದ್ದ ಕಾಂಗ್ರೆಸ್ ದಶಕಗಳ ಕಾಲದಿಂದ ಮೀಸಲಾತಿ ಹೆಸರಿನಲ್ಲಿ ಮೋಸ ಮಾಡುತ್ತಲೇ ಬಂದಿತ್ತು. ಆದರೆ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇಡುವ ಮೂಲಕ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಜಾರಿ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಟ್ಟಿದೆ.”
-ಅಯ್ಯಪ್ಪ ರಾಮತೀರ್ಥ ಬಿಜೆಪಿ ಹಾಲು ಪ್ರಕೋಷ್ಠದ ಜಿಲ್ಲಾ ಸಂಚಾಲಕರು.