ತುಮಕೂರು, ಅ. ೧೪- ದೈಹಿಕ ಕಾಯಿಲೆಗಳಂತೆ ಮಾನಸಿಕ ಕಾಯಿಲೆಯನ್ನು ಸೂಕ್ತ ಚಿಕಿತ್ಸೆ ಪಡೆದು ನಿವಾರಣೆ ಮಾಡಿಕೊಳ್ಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಬಹಳಷ್ಟು ಜನ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಅದನ್ನು ನಿರ್ಲಕ್ಷ ಮಾಡುವವರೇ ಹೆಚ್ಚು. ಕಾಯಿಲೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಬೇಕು ಎಂದು ಶ್ರೀದೇವಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮನೋ ವೈದ್ಯರಾದ ಡಾ.ಭಾವನಾ ಹೇಳಿದರು.
ನಗರದ ಶಂಕರಪುರಂನ ಪಾವನ ಆಸ್ಪತ್ರೆ ವತಿಯಿಂದ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನೋ ರೋಗ ಇರುವ ಬಹಳಷ್ಟು ಜನ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ತನಗೆ ಮಾನಸಿಕ ಕಾಯಿಲೆ ಇದೆ ಎಂದು ಗೊತ್ತಾದರೆ ಸಮಾಜ, ಸಂಸಾರದಲ್ಲಿ ತನ್ನ ಬಗ್ಗೆ ಇರುವ ಅಭಿಪ್ರಾಯ ಬದಲಾಗಬಹುದು, ತನ್ನನ್ನು ಕೀಳಾಗಿ ಕಾಣಬಹುದು ಎಂಬ ಅಳುಕು ಇದೆ. ಇಂತಹ ಕಾಯಿಲೆ ಸಹಜ ಎಂದು ಭಾವಿಸಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ, ಆಘಾತಕಾರಿ ಘಟನೆಗಳಿಂದ ಮಾನಸಿಕವಾಗಿ ಕುಗ್ಗಬಹುದು. ಇಂತಹ ಹಲವಾರು ಕಾರಣಗಳಿಂದ ಮಾನಸಿಕ ರೋಗ ಬರಬಹುದು.ಇದರಿಂದ ಕೀಳರಿಮೆ, ಕೆಲಸದಲ್ಲಿ ನಿರುತ್ಸಾಹ, ಮಾಡುವ ಕೆಲಸದಲ್ಲಿ ಸಾಮರ್ಥ್ಯ ಕಡಿಮೆಯಾಗಬಹುದು. ಏಕಾಂಗಿತನ ಕಾಡುವುದು, ಆತ್ಮಹತ್ಯೆಗೂ ಪ್ರೇರಣೆಯಾಗುವ ಅಪಾಯವಿದೆ. ಇಂತಹ ಲಕ್ಷಣಗಳು ಕಂಡು ಬಂದಾಗ ಮನೋ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯವಿದ್ದರೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಕುಟುಂಬಸ್ಥರು ಮಾರ್ಗದರ್ಶನ ಮಾಡಬೇಕು ಎಂದರು.
ಮಾನಸಿಕಕ ಚಿಕಿತ್ಸೆ ಪಡೆಯುವವರನ್ನು ಸಮಾಜ ಹುಚ್ಚರು ಎನ್ನುತ್ತದೆ ಎಂಬ ಅನುಮಾನ, ಆತಂಕ ಬೇಡ. ಇದೂ ಕೂಡಾ ಸಹಜ ಕಾಯಿಲೆ ಚಿಕಿತ್ಸೆ ನಂತರ ನಿವಾರಣೆಯಾಗುತ್ತದೆ ಎಂಬ ಮನೋಭಾವ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇವರಿಗೆ ಅವಮಾನವಾಗದಂತೆ ಗೌರವದಿಂದ ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ಪಾವನಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಡಿ.ಮುರಳೀಧರ್, ಸ್ತ್ರೀ ರೋಗ ತಜ್ಞರಾದ ಡಾ.ಪಾವನಾ, ಡಾ.ಅಶ್ರಾ, ಡಾ.ಪರ್ಣ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.