
ಕಲಬುರಗಿ.ಮಾ 26: ಮಾಧವತೀರ್ಥ ಶ್ರೀಪಾದಂಗಳವರು ವೈರಾಗ್ಯ ಶಿರೋಮಣಿಗಳು, ಶೇಷ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದ ಶೇಷಾಂಶ ಸಂಭೂತರು. ಸದಾ ಕಾಲ ಶ್ರೀವಿಠ್ಠಲಕೃಷ್ಣನ ಪೂಜೆಗೆಯುತ್ತಿದ್ದರು ಎಂದು ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಗೀತಾ ರಾಘವೇಂದ್ರ ವಕೀಲ ನುಡಿದರು.
ಸಂಗಮೇಶ್ವರ ಬಡಾವಣೆಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಭವನದಲ್ಲಿ ಮಾಧವತೀರ್ಥ ಶ್ರೀಪಾದಂಗಳವರ 213ನೇ ಆರಾಧನೆ ಪ್ರಯುಕ್ತ ಮೈತ್ರಿಯಿ ಭಜನಾ ಮಂಡಳಿ ಹಾಗೂ ಕಣ್ವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ವಿಷ್ಣುಭಕ್ತಿ ಮತ್ತು ಮಧ್ವತತ್ವಗಳ ಪ್ರಸಾರವನ್ನು ಮಾಡಲು 1796ರ ನಳನಾಮ ಸಂವತ್ಸರದ ಮಾಘ ಶುಕ್ಲ ಪಂಚಮಿಯ ಶ್ರೀಕಣ್ವ ಮಹರ್ಷಿಗಳ ಜಯಂತಿಯಂದು ಉಡುಪಿಯ ಕಣ್ವ ತೀರ್ಥದಲ್ಲಿ ಶಿರೂರು ಮಠದ ಲಕ್ಷ್ಮಿ ಮನೋಹರ ತೀರ್ಥರಿಂದ ಸನ್ಯಾಸದೀಕ್ಷೆಯನ್ನು ಪಡೆದ ಕಣ್ವಮಠದ ಸ್ಥಾಪನಾಚಾರ್ಯರು ಕಣ್ವ ಸಮಾಜೋದ್ಧಾರಕರು ಎಂದು ಬಣ್ಣಿಸಿದರು. ವೀರಘಟ್ಟದಲ್ಲಿ ಮಾಧವತೀರ್ಥ ಶ್ರೀಪಾದಂಗಳವರು 14 ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು, ಮಸ್ಕಿ ತಾಲೂಕಿನ ಬುದ್ದಿನ್ನಿಯಲ್ಲಿ ವೃಂದಾವನಸ್ಥರಾಗಿ ಭಕ್ತರಿಗೆ ಈಗಲೂ ಶೇಷ ರೂಪದಲ್ಲಿ ದರ್ಶನವಿತ್ತು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಆಶೀರ್ವದಿಸುತ್ತಿದ್ದಾರೆ ಎಂದರು.
ಆರಾಧನೆ ಪ್ರಯುಕ್ತ ಬೆಳಿಗ್ಗೆ ಶ್ರೀಸೂರ್ಯಕವಚ ಸ್ತೋತ್ರ, ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಅಷ್ಟೋತ್ತರ ಶತನಾಮ ಸ್ತೋತ್ರಾವಳಿ ಹಾಗೂ ಶ್ರೀಮಾಧವತೀರ್ಥರ ಅಷ್ಟೋತ್ತರ ಪಾರಾಯಣ ಮಾಡಲಾಯಿತು.ನಂತರ ಶ್ರೀಮನ್ ಮಾಧವತೀರ್ಥರ ಭಾವಚಿತ್ರಕ್ಕೆ ವಿಶೇಷವಾದ ಅಲಂಕಾರ, ಅರ್ಚಕರಾದ ರಾಮಾಚಾರ್ಯ ಅವರಿಂದ ವಿಶೇಷವಾದ ಪೂಜೆ ಹಾಗೂ ಭಜನಾ ಮಂಡಳಿಯ ಸುಮಂಗಲೆಯರಿಂದ ಭಜನೆ ನಡೆಯಿತು.
ಪ್ರಮುಖರಾದ ಭೀಮಸೇನರಾವ್ ಸಿಂಧಗೇರಿ, ವಿನುತ ಎಸ್ ಜೋಶಿ, ಸಂತೋಷ ಜೋಶಿ, ರವಿ ಅವರಸಂಗ್, ಭೀಮರಾವ್ ಕುಲಕರ್ಣಿ, ಶ್ರೀಧರರಾವ್ ಕುಲಕರ್ಣಿ ಅವಧೂತ ಕುಲಕರ್ಣಿ, ಭಜನಾ ಮಂಡಳಿಯ ಅಧ್ಯಕ್ಷೆ ಅಂಬುಜಾ ಸಿಂದಗಿರಿ, ತಾರಾಬಾಯಿ ಕುಲಕರ್ಣಿ, ಸುರೇಖಾ ದೋಟಿಹಾಳ ಅವರ ಸುಶ್ರಾವ್ಯವಾಗಿ ಶ್ರೀ ಮಾಧವತೀರ್ಥರ ಸ್ತುತಿಗೈದರು. ಸುಚಿತ್ರ ಕುಲಕರ್ಣಿ, ಪೂರ್ಣಿಮಾ ದೇವರು, ಮಾಲತಿ ಕುಲಕರ್ಣಿ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಭಕ್ತರು ಉಪಸ್ಥಿತರಿದ್ದರು.