
ಕಲಬುರಗಿ: ಮೇ.17:ರಾಜ್ಯ ರಾಜಕಾರಣಕ್ಕೆ ಹಿಂತಿರುಗಿರುವ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರಿಗೆ ಡಿಸಿಎಂ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜ ಜಿಲ್ಲಾಧ್ಯಕ್ಷ ಸಿದ್ಧಲಿಂಗ ಸಿ ಕಟ್ಟಿಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮುನಿಯಪ್ಪ ಅವರ ರಾಜಕಾರಣ ಪ್ರವೇಶದಿಂದಾಗಿ ಮಾದಿಗ ಸಮುದಾಯ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಸೇರಿ ಸಮುದಾಯದ ಮೂರ???ಲ್ಕು ಶಾಸಕರಲ್ಲಿ ಇಬ್ಬರನ್ನಾದರೂ ಮಂತ್ರಿಗಳನ್ನಾಗಿ ಮಾಡಿದರೆ ರಾಜ್ಯದ ದಕ್ಷಿಣ ಮತ್ತು ಉತ್ತರ ಪ್ರಾಂತ್ಯಗಳಿಗೆ ಸಾಮಾಜಿಕ ನ್ಯಾಯ ದೊರೆಯುತ್ತದೆ. ಅವಕಾಶ ಒದಗಿದರೆ ಸಂಸದ, ಕೇಂದ್ರ ಮಂತ್ರಿಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ಡಿಸಿಎಂ ಆಗಲಿ ಎಂದರು.
ಡಿಸಿಎಂ ಹುದ್ದೆ ಸೃಷ್ಟಿಯಾದಲ್ಲಿ ಮಾದಿಗ ಸಮುದಾಯದ ಶಾಸಕರನ್ನೂ ಪರಿಗಣಿಸಬೇಕು. ಜನರ ಮಧ್ಯೆ ಇರುವಂಥ ಜವಾಬ್ದಾರಿ ಖಾತೆಗಳನ್ನು ಕೊಡಬೇಕು. ಅಧಿಕಾರ ಹಂಚುವಾಗ ಕೆಲವು ಸೂತ್ರ ಪಾಲಿಸಬೇಕಾಗುತ್ತದೆ. ಅಂಥ ಸನ್ನಿವೇಶದಲ್ಲಿ 2ನೇ ಅತ್ಯುನ್ನತ ಸ್ಥಾನವನ್ನು ಕೊಟ್ಟು ರಾಜಕಾರಣದಲ್ಲಿ ಸಮಾಜದ ಶಕ್ತಿಯನ್ನು ಹೆಚ್ಚಿಸಬೇಕಿದೆ ಎಂದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ಕೈ ಹಿಡಿಯದ ಕಾರಣಕ್ಕೆ ಅಧಿಕಾರಕ್ಕೆ ಬರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ನಮ್ಮ ಸಮಾಜ ಕಾಂಗ್ರೆಸ್ ಬೆಂಬಲಿಸಿದೆ. ರಾಜೀ ಸನ್ನಿವೇಶದಲ್ಲಿ ಸಿಎಂ ಸ್ಥಾನಕ್ಕೆ ಬೇರೊಬ್ಬರನ್ನು ಪರಿಗಣಿಸುವುದೇ ಆದರೆ ಮುನಿಯಪ್ಪ ಅವರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.