ಮಾದರಿ ಜಿಲ್ಲೆಗೆ ಅಧಿಕಾರಿಗಳ ಸಹಕಾರ ಅಗತ್ಯ

ಕೋಲಾರ, ಜೂ. ೨೪- ಕೋಲಾರ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಅಕ್ರಂ ಪಾಷಾರವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊದಲ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಪ್ರಸ್ತುತ ಸರ್ಕಾರ ಬದಲಾಗಿದ್ದು ಕಾರ್ಯವೈಖರಿಗಳನ್ನು ಸೂಚನೆ ಪ್ರಕಾರ ಬದಲಾಯಿಸಿ ಕೊಳ್ಳ ಬೇಕಾಗಿರುವುದು ಅನಿವಾರ್ಯವಾಗಿದೆ. ಆದ್ದರಿಂದ ಹೊಸ ಸರ್ಕಾರದ ಆಶಯಗಳಿಗನುಗುಣವಾಗಿ ಅದರ ವೇಗಕ್ಕೆ ತಕ್ಕಂತೆ ಕೆಲಸ ಮಾಡುವುದು ಕಾರ್ಯಾಂಗದ ಮೇಲಿನ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಮಟ್ಟದ ಕಚೇರಿಗಳ ಅಂತರ್ಜಾಲ ತಾಣಗಳನ್ನು ಉನ್ನತೀಕರಿಸುವುದರಿಂದ (uಠಿಜಚಿಣe) ಜನಸಾಮಾನ್ಯರು ಅನಾವಶ್ಯಕವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ ಈ ಹಿನ್ನೆಲೆಯಲ್ಲಿ ಇಂದಿನ ತಂತ್ರಜ್ಞಾನಕ್ಕನುಗುಣವಾಗಿ ತಮ್ಮ ತಮ್ಮ ಕಚೇರಿಗಳ ವೆಬ್‌ಸೈಟ್ ಗಳನ್ನು ಅಪ್‌ಡೇಟ್ ಮಾಡುವುದು ಪ್ರಥi ಅದ್ಯತೆಯ ಕೆಲಸವಾಗಿದೆ. ಇದರಿಂದ ಸಾರ್ವಜನಿಕರಿಗೆ ನಿಮ್ಮ ಕಚೇರಿಯಲ್ಲಿ ಲಭ್ಯವಾಗುವ ಸೇವೆಗಳ ಮಾಹಿತಿ ಅವರು ಕುಳಿತಲ್ಲೇ ದೊರೆಯುತ್ತದೆ. ಆಗ ನಿಮ್ಮ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದರು.
ಅಧಿಕಾರಿಗಳು ಎಲ್ಲಾಸಭೆಗಳಿಗೆ ಖುದ್ದು ಹಾಜರಾಗಬೇಕು. ಸಮಯ ಪಾಲನೆ ಮಾಡಬೇಕು ಹಾಗೂ ಸಬೆಗೆ ಸಂಪೂರ್ಣ ಮಾಹಿತಿಯನ್ನು ಖುದ್ದು ಪರಿಶೀಲಿಸಿ ಮಂಡಿಸಬೇಕು. ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಖಾತ್ರಿಪಡಿಸಿಕೊಳ್ಳಬೆಕು ಎಂದು ತಿಳಿಸಿದರು.
ಈ ಸಭೆಯ ಮೂಲ ಉದ್ದೇಶ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿದ್ದರೂ ಕುಡಿಯುವ ನೀರಿನ ಅಭಾವ ಉಂಟಾಗಿಲ್ಲ. ಸಮಸ್ಯೆ ಕಂಡುಬಂದಿರುವ ಪ್ರದೇಶಗಳಲ್ಲಿ ಈಗಾಗಲೇ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವನೀರು , ವಸತಿ ಮುಂತಾದ ಅತೀ ಉಪಯುಕ್ತ ವಿಷಯಗಳಿಗೆ ಪರಮಾದ್ಯತೆ ನೀಡಬೇಕು ಸಂಬಂಧಿಸಿದ ಅಧಿಕಾರಿಗಳು ಇಂತಹ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದರು.
ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ನಗರಸಭೆಯಿಂದ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಜನರ ಆರೋಗ್ಯದ ವಿಚಾರದಲ್ಲಿ ವಿಳಂಬ ಧೋರಣೆ ಮಾಡಕೂಡದು. ತ್ಯಾಜ್ಯ ವಿಲೇವಾರಿಗೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ಸೂಕ್ತ ಸ್ಥಳ ಲಭ್ಯವಿಲ್ಲದಿದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿದರೆ ಸೂಕ್ತ ಜಾಗ ಗುರುತಿಸಿಕೊಡುವುದಾಗಿ ತಿಳಿಸಿದರು. ಅಂತೆಯೇ ನಿಮ್ಮ ನಿಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಟ್ಟುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ರವರು ಮಾತನಾಡಿ ಜಿಲ್ಲೆಯ ಅಧಿಕಾರಿಗಳು ಸವಾಲುಗಳನ್ನು ಎದುರಿಸಲು ಸಮರ್ಥರಿದ್ದಾರೆ. ಆದರೆ ಸಭೆಗಳಲ್ಲಿ ಚರ್ಚಿಸುವ ವಿಷಯಗಳಿಗೆ ಮಾತ್ರ ಸ್ಪಂದಿಸುತ್ತಾರೆ ಹಾಗಲ್ಲದೇ ತಮ್ಮ ವ್ಯಾಪ್ತಿಗೆ ಬರುವ ಎಲ್ಲ ವಿಷಯಗಳಲ್ಲೂ ಸಹ ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ದಿ ಆಗಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ,ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ್ ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.