
ಶಿಕಾರಿಪುರ, ಮೇ 16: ಶಿಕಾರಿಪುರ ತಾಲೂಕಿನ ಬಂಡಿಭೈರನಹಳ್ಳಿ ಮಜಿರೆ ಸಿದ್ದಾಪುರ
ಗ್ರಾಮದಲ್ಲಿರುವ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸೇರಿದ ಅಡಕೆ
ತೋಟದಲ್ಲಿ ವಾಮಾಚಾರ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ!
ಈ ಸಂಬಂಧ ತೋಟದದಲ್ಲಿ ಕಾರ್ಯನಿರ್ವಹಿಸುವ ಎಸ್.ಕೆ.ರಮೇಶ್ ಅವರು ಶಿಕಾರಿಪುರ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್.ಐ.ಆರ್.
ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ: ಮೇ 11 ರಂದು ರಾತ್ರಿ ಸರಿಸುಮಾರು 10 ಗಂಟೆಯಿಂದ 10.30 ರೊಳಗೆ
ವಾಮಾಚಾರ ನಡೆಸಲಾಗಿದೆ. ಪುನಗು ಬೆಕ್ಕನ್ನು ಸಾಯಿಸಿ ತೋಟದಲ್ಲಿ ಗುಂಡಿ ತೆಗೆದು
ಹೂಳಲಾಗಿದೆ. ಅದರ ಮೇಲೆ ಹೂವು ಮತ್ತೀತರ ಪೂಜಾ ಸಾಮಗ್ರಿಗಳನ್ನು ಹಾಕಲಾಗಿದೆ. ಅಂದು
ರಾತ್ರಿಯೇ ವಾಮಾಚಾರ ನಡೆದಿರುವ ವಿಷಯ ಬಿ.ಎಸ್.ಯಡಿಯೂರಪ್ಪರ ಕುಟುಂಬ ಸದಸ್ಯರಿಗೆ
ಗೊತ್ತಾಗಿದೆ.
ಬಿ.ವೈ.ರಾಘವೇಂದ್ರ ಹೇಳಿದ್ದೇನು?: ಶಿಕಾರಿಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ
ಬಿ.ವೈ.ರಾಘವೇಂದ್ರ ಮಾತನಾಡಿ, ‘ತೋಟದಲ್ಲಿ ಪುನಗು ಬೆಕ್ಕನ್ನು ಹೂತು ಹಾಕಿರುವುದು
ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ, ಕೊಳ್ಳೆಗಾಲ ಸುತ್ತಮುತ್ತಲು ಈ ಬೆಕ್ಕುಗಳು
ಹೆಚ್ಚಾಗಿ ಕಂಡುಬರುತ್ತವೆ’ ಎಂದು ತಿಳಿಸಿದ್ದಾರೆ.
ಪುನಗು ಬೆಕ್ಕು ಬಳಸಿ ನಡೆಸಲಾಗುವ ವಾಮಾಚಾರವು ನಮ್ಮಲ್ಲಿರುವ ಶಕ್ತಿಯನ್ನು
ಆಕರ್ಷಿಸಲು, ಕೆಡಕಾಗಲು ನಡೆಸಲಾಗುತ್ತದೆ. ವಿರೋಧಿಗಳು ಈ ವಾಮಾಚಾರ ನಡೆಸಿದ್ದಾರೆ.
ತಂದೆ ಯಡಿಯೂರಪ್ಪ, ಸಹೋದರ ಬಿ.ವೈ.ವಿಜಯೇಂದ್ರ, ಬಿಜೆಪಿ ಪಕ್ಷಕ್ಕೆ ಕೆಡಕು ಉಂಟು
ಮಾಡುವ ಉದ್ದೇಶದಿಂದ ವಾಮಾಚಾರ ನಡೆಸಲಾಗಿದೆ ನಡೆಸಲಾಗಿದೆ ಎಂದು ದೂರಿದ್ದಾರೆ.
ಆರೋಪವೇನು?: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ
ಕಣಕ್ಕಿಳಿದಿದ್ದ ಬಿ.ವೈ.ವಿಜಯೇಂದ್ರ ಅವರು ಪರಾಭವಗೊಳ್ಳಬೇಕೆಂಬ ದುರುದ್ದೇಶದಿಂದ ಹಾಗೂ
ಬಿ.ಎಸ್.ಯಡಿಯೂರಪ್ಪರವರ ಕುಟುಂಬಕ್ಕೆ ಕೆಡಕುಂಟಾಗಬೇಕೆಂಬ ಕಾರಣದಿಂದ ವಿರೋಧಿಗಳು ಈ
ವಾಮಾಚರ ನಡೆಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕರು ಆರೋಪಿಸುತ್ತಾರೆ.