
ಸೈದಾಪುರ:ಜು.12:ಇಲ್ಲಿಗೆ ಸಮೀಪದ ಮಾದ್ವಾರ ಗ್ರಾಮ ಪಂಚಾಯತ ಮುಂದೆ ಮಾಜಿ ಗ್ರಾಮ ಪಂಚಾಯತ ಸದಸ್ಯ ಶಿವರಾಜಪ್ಪ ಸಾಮಾಜಿಕ ಅರಣ್ಯ ಇಲಾಖೆಯ ಕಾರ್ಯ ನಿರ್ಲಕ್ಷತನದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡಿದರು.
ಪರಿಸರ ಸಂರಕ್ಷಣೆಗಾಗಿ ಗಿಡಗಳನ್ನು ನೆಡಲು ಮಾದ್ವಾರ ಗ್ರಾಮದಿಂದ ತೋರಣತಿಪ್ಪ ರಸ್ತೆವರೆಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಅನುದಾನ ಬಿಡಗಡೆ ಮಾಡಿತ್ತು. ಅದನ್ನು ಯಾವುದೇ ಕೂಲಿ ಕಾರ್ಮಿಕರಿಲ್ಲದೆ ಯಂತ್ರಗಳ ಮುಖಾಂತರ ಕೆಲಸ ಮಾಡಿ ಮುಗಿಸಿರುತ್ತಾರೆ. ದಿನಗೂಲಿ ಲೆಕ್ಕದಡಿ ಬಡ ಕೂಲಿ ಕಾರ್ಮಿಕರಿಗೆ ದಿನಕ್ಕೆ 316 ರೂಪಾಯಿಗಳಂತೆ ಕೆಲಸ ಮಾಡಿದರೆ ಕೂಲಿ ಕಾರ್ಮಿಕರ ಜೀವನೋಪಾಯಕ್ಕೆ ಅನುಕೂಲವಾಗುತ್ತಿತ್ತು. ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಿದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಇಗಾಗಲೇ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಕ ಅಧಿಕಾರಿಯವರ ಗಮನಕ್ಕೆ ತರಲಾಗಿತ್ತು. ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಉಪವಾಸ ಕೈಗೊಳ್ಳಲಾಗುತ್ತಿದೆ. ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇನೆ ಎಂದು ಸತ್ಯಾಗ್ರಹ ನಿರತ ಶಿವರಾಜಪ್ಪ ತಿಳಿಸಿದರು.