ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.28 :- ಮನೆಯ ಕಾಂಪೌಂಡ್ ಹೊರಗಡೆ ಮಕ್ಕಳೊಂದಿಗೆ ನಿಂತಿದ್ದ ಮಹಿಳೆಯನ್ನು ಗಮನಿಸಿದ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ 8-20ಗಂಟೆಗೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಜರುಗಿದೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದ ಮಾಲೀಕ ಕೆ ಹೆಚ್ ವೀರನಗೌಡ ಅವರ ಮಗಳಾದ ಕೆ.ಪುಷ್ಪಾಶಿವಕುಮಾರ ಅವರು ತಂದೆ ತಾಯಿಯನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದು ಮಾತನಾಡಿಸಿಕೊಂಡು ಅವರ ಮನೆಯ ಮುಂದೆ ಕಾಂಪೌಂಡ್ ಹೊರಗಡೆ ತಮ್ಮಂದಿರ ಮಕ್ಕಳೊಂದಿಗೆ ನಿಂತಿದ್ದಾಗ ಏಕಾಏಕಿ ಬೈಕಿನಲ್ಲಿ ಬಂದ ಇಬ್ಬರು ಕಳ್ಳರಲ್ಲಿ ಓರ್ವ ಬೈಕ್ ಇಳಿದು ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳುವಾಗ ಮಹಿಳೆ ನೂಕಿದರು ಬಿಡದ ಕಳ್ಳ ಮಹಿಳೆಯ ಕುತ್ತಿಗೆಯಲ್ಲಿನ ನಾಲ್ಕು ತೊಲದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿ ಬೈಕಿನಲ್ಲಿ ಹತ್ತಿಕೊಂಡು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆಂದು ಸಮೀಪದ ಮನೆಯ ಮುಂದೆ ಹಾಕಲಾಗಿದ್ದ ಸಿ ಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ವಿಷಯ ತಿಳಿದ ಕೂಡ್ಲಿಗಿ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿಮಾಡಿ ಪರಿಶೀಲನೆ ನಡೆಸಿದ್ದಾರೆ ಸಿ ಸಿ ಕ್ಯಾಮರಾ ಮಾಹಿತಿ ಕಲೆಹಾಕಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.