ಮಹಿಳೆಯರಲ್ಲಿ ವೈಚಾರಿಕ ಮನೋಭಾವನೆ ಹೆಚ್ಚಾಗಲಿ

ಕಲಬುರಗಿ:ಎ.8: ಮಹಿಳೆಯರು ಇಂದು ಶಿಕ್ಷಣವನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ. ಆದರೆ ಇಂದಿಗೂ ಕೂಡಾ ಮಹಿಳೆಯರು ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳ ಪಾಲಿಸುತ್ತಿರುವುದು ಕಂಡು ಬರುತ್ತದೆ. ಮಹಿಳೆಯರು ಸಂಪೂರ್ಣವಾಗಿ ವೈಚಾರಿಕತೆ ಮೈಗೂಡಿಸಿಕೊಂಡರೆ ಇನ್ನೂ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ ಎಂದು ವಿ.ಜಿ.ಮಹಿಳಾ ಪದವಿ ಕಾಲೇಜಿನ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಡಾ.ಸವಿತಾ ಜೆ.ಉಮಾಶೆಟ್ಟಿ ಅಭಿಮತಪಟ್ಟರು.

ನಗರದ ಲೋಹಾರ ಗಲ್ಲಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಸಾಧಕ ಮಹಿಳೆಯರಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

    ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಂದು ಮುಂದುವರೆದು, ಕೈತುಂಬಾ ಹಣ ಸಂಪಾದಿಸಿ ಆರ್ಥಿಕವಾಗಿ ಸಬಲಳಾಗುತ್ತಿದ್ದಾಳೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ದೇವರ ಹೆಸರಿನಲ್ಲಿನ ಹರಕೆಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗದೆ, ಬಂದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಛಲಗಾರಿಕೆ ಬೆಳೆಸಿಕೊಳ್ಳಬೇಕು. ಮಹಿಳಾ ಸಮಾನತೆಗೆ ಬಸವಾದಿ ಶರಣರು, ಡಾ.ಅಂಬೇಡ್ಕರ್, ಸಾವಿತ್ರಿಬಾ ಫುಲೆರಂತಹ ಅನೇಕ ಮಹನೀಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪ್ರಕೃತಿಯ ಸಮತೋಲನೆಗೆ ಗಂಡು ಮತ್ತು ಹೆಣ್ಣು ಇಬ್ಬರೂ ಅಗತ್ಯವಾಗಿದೆ. ಹೆಣ್ಣಿನ ಬಗ್ಗೆ ಕೀಳರಿಮೆ ಬೇಡ. ಆಕೆಗೆ ದೊರೆಯಬೇಕಾದ ಎಲ್ಲಾ ಸೌಕರ್ಯಗಳನ್ನು ನೀಡಿ, ಮಹಿಳಾ ಸಬಲೀಕರಣವಾದಾಗ ಮಾತ್ರ ಲಿಂಗ ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದರು.

   ಕಾರ್ಯಕ್ರಮದಲ್ಲಿ ಬಾಳಪ್ಪ ಬೋಳಶೆಟ್ಟಿ ನರೋಣಾ, ಜಗದೀಶ್ ಉಮಾಶೆಟ್ಟಿ, ಮಲ್ಲಿನಾಥ ಮುನ್ನಳ್ಳಿ, ನೀಲಮ್ಮ ಬೋಳಶೆಟ್ಟಿ, ವಿಜಯಲಕ್ಷ್ಮೀ ಬೋಳಶೆಟ್ಟಿ, ಧರ್ಮರಾಜ ಒಡೆಯರ್, ಬಸವರಾಜ ರೋಲೆ, ವಿವೇಕ್ ಬೋಳಶೆಟ್ಟಿ, ಸುನೀತಾ ಕಿರಣಗಿ,   ಆದಿತ್ಯ ಕಿರಣಗಿ, ಅನುಷ್ಕಾ ಕಿರಣಗಿ, ಗೌರಿ ಉಮಾಶೆಟ್ಟಿ ಸೇರಿದಂತೆ ಮತ್ತಿತರರಿದ್ದರು.