ರಾಯಚೂರು,ಜೂ.೦೨-
ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆ ಸಾರ್ವಜನಿಕ ಸ್ತ್ರೀ ಸಮಸ್ಯೆ ಆಗಿದ್ದು, ಆ ನಿಟ್ಟಿನಲ್ಲಿ ಸ್ತ್ರೀಯು ತನ್ನ ಶುಚಿತ್ವಕ್ಕೆ ಮುಜುಗರ ಇಲ್ಲದೆ ನೈರ್ಮಲ್ಯ ನಿರ್ವಹಣೆಗೆ ಮುಂದಾಗಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವ ಪ್ರೊ.ಎಂ.ಯರಿಸ್ವಾಮಿ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ರಾಯಚೂರು ವಿಶ್ವವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ರಾಯಚೂರು ಇವರ ಸಹಯೋಗದಲ್ಲಿ ’ಮೇ ೨೮ ವಿಶ್ವ ಋತುಚಕ್ರ ನೈರ್ಮಲ್ಯ ದಿನ’ ಅಂಗವಾಗಿ ಮಾತನಾಡಿದ ಅವರು ಹೆಣ್ಣುಮಕ್ಕಳ್ಳಲ್ಲಿ ಆರೋಗ್ಯ ಕುರಿತು ಸಾಕಷ್ಟು ಸಮಸ್ಯೆಗಳಿದ್ದು ಮೂಢನಂಬಿಕೆಗೆ ಮಾರುಹೋಗಿ ಸಮಸ್ಯೆಗಳಾಗಿಯೇ ಉಳಿದಿವೆ ಯಾವುದೇ ಸಂಕೋಚವಿಲ್ಲದೇ ಸ್ತ್ರೀ ತನ್ನ ರೋಗದ ಪ್ರಕೃತಿಯ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡು ಶುಚಿತ್ವದೆಡೆಗೆ ಜಾಗೃತರಾಗಿ ಇತರ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರಾಯಚೂರು ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ.ಪಾರ್ವತಿ ಸಿ.ಎಸ್. ಮಾತನಾಡಿ, ಆಗಿನ ಕಾಲದಿಂದಲೂ ಋತುಸ್ರಾವದ ಸಂದರ್ಭದಲ್ಲಿ ಇರುವ ಪದ್ದತಿಗಳ ಬಗ್ಗೆ ಸಾಕಷ್ಟು ಗೊಂದಲಗಳು ಹೆಣ್ಣುಮಕ್ಕಳಲ್ಲಿವೆ ಕಾರಣ ಅಂತಹ ವಿಚಾರಗಳನ್ನು ಮುಚ್ಚಿಟ್ಟು ಅಪಾರ್ಥ ಮಾಡಿಕೊಳ್ಳುತ್ತಿದ್ದಾರೆ. ವೈಜ್ಞಾನಿಕವಾಗಿಯೇ ಅವುಗಳನ್ನು ಅರ್ಥಮಾಡಿಕೊಳ್ಳಬೇಕೇ ವಿನಃ ಅಲ್ಲಗಳೆದು ವರ್ತಿಸಿದರೆ ಬಂಜೆತನ, ಬಲಹೀನತೆ ಸಮಸ್ಯೆಗಳು ಕಾಡುತ್ತವೆ ಹಾಗಾಗಿ ಶುಚಿತ್ವಕ್ಕೆ ಸ್ತ್ರೀ ಹೆಚ್ಚು ಮಾನ್ಯತೆ ನೀಡಬೇಕು ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಖ್ಯಾತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಶೀಲಾ.ಎಸ್.ಸಗರದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ, ಕುಟುಂಬ ಜವಾಬ್ದಾರಿ ಹೊರುವ ಮಹಿಳೆ ತನ್ನ ಆರೋಗ್ಯ ದತ್ತ ಗಮನ ಹರಿಸುವುದು ತುಂಬಾ ಕಡಿಮೆ ಎಷ್ಟೇ ನೋವು ಸಮಸ್ಯೆ ಇದ್ದರೂ ತನ್ನಲ್ಲೇ ಮುಚ್ಚಿಟ್ಟುಕೊಳ್ಳುತ್ತಾಳೆ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಪುರುಷರಿಗಿಂತ ಮಹಿಳೆಯರು ರೋಗಗಳಿಗೆ ಹೆಚ್ಚು ತುತ್ತಾಗುತ್ತಾರೆ ಹುಡಿಗಿಯು ಋತುಮತಿಯಾದ ನಂತರ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಸಮಾಜ ಏನೆನ್ನುತ್ತದೆಯೋ ಎನ್ನುವ ಭಯ ಮತ್ತು ನಾಚಿಕೆಯಿಂದ ತನ್ನ ದೇಹ ಪ್ರಕೃತಿಯ ಬಗ್ಗೆ ಕಾಳಜಿ ವಹಿಸದೆ ಸಮಸ್ಯೆ ಸೃಷ್ಟಿಸಿಕೊಳ್ಳುತ್ತಾಳೆ. ಋತುಚಕ್ರದಲ್ಲಿನ ನೈರ್ಮಲ್ಯತೆ, ಹಾರ್ಮೊನ್ಸ್ಗಳ ಅಸಮತೋಲನದಿಂದಾಗುವ ತೊಂದರೆಗಳು ಸ್ತ್ರೀ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ, ಸ್ತ್ರೀ ರೋಗ ನಿರೋಧಕ ಶಕ್ತಿ ಇನ್ನಿತರ ಸ್ತ್ರೀ ಆರೋಗ್ಯ ಮತ್ತು ಶುಚಿತ್ವದ ಕುರಿತು ಸಾಕಷ್ಟು ವಿಷಯಗಳನ್ನು ವಿವರಿಸಿ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಗೊಂದಲಗಳನ್ನು ಪರಿಹರಿಸಿದರು.
ರಾಯಚೂರಿನ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಾಳಿ ಅವರು ಪ್ರಾಸ್ತಾವಿಕ ಮಾತನಾಡಿ, ಲಯನ್ಸ್ ಕ್ಲಬ್ ಪರವಾಗಿ ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಸ್ಯಾನಿಟರಿ ಪ್ಯಾಡ್ ಇನ್ಸಿನೇಟರ್ನ್ನು ಕೊಡುಗೆ ನೀಡಿದರು.
ರಾವಿವಿ ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ್, ಸಮಾಜ ವಿಜ್ಞಾನ ನಿಕಾಯ ಡೀನ್ ಪ್ರೊ.ನುಸೃತ್ ಫಾತೀಮಾ, ರಾಯಚೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಶಿವಾಳಿ, ಖಜಾಂಚಿ ರಾಮು ಪೆರಿಟಾಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ಕಲಾ ನಿಕಾಯ ಡೀನ್ ಪ್ರೊ.ಪಿ.ಭಾಸ್ಕರ್, ಅಭಿಯಂತರ ಪಂಪಾಪತಿ, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂಗ್ಲಿಷ್ ವಿಭಾಗದ ವಿದ್ಯಾರ್ಥಿನಿ ನಾಗಮ್ಮ ಪ್ರಾರ್ಥನೆ ಗೀತೆಯನ್ನು ಹಾಡಿದರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಡಾ.ರಶ್ಮೀರಾಣಿ ಅಗ್ನಿಹೋತ್ರಿ ನಿರೂಪಿಸಿದರು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಗೀತಮ್ಮ ಸ್ವಾಗತಿಸಿದರೆ, ಐಟಿ ವಿಭಾಗದ ಉಪನ್ಯಾಸಕಿ ಶ್ವೇತಗೌಡ ಅತಿಥಿಯನ್ನು ಪರಿಚಯಿಸಿದರು, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ವಿಜಯಲಕ್ಷ್ಮೀ ವಂದಿಸಿದರು.