
ಕಲಬುರಗಿ,ಮೇ.25-ಒಲಂಪಿಕ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ತಂದು ದೇಶದ ಗೌರವವನ್ನು ಎತ್ತಿಹಿಡಿದ ಹೆಣ್ಣು ಮಕ್ಕಳು ತಮಗಾದ ಲೈಂಗಿಕ ಕಿರುಕುಳದ ವಿರುದ್ದ ದೇಶದ ರಾಜಧಾನಿಯಲ್ಲಿ ಬೀದಿಗಳಿದು ಪ್ರತಿಭಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಬಹಳ ಬೇಸರದ ಸಂಗತಿ ಎಂದು ಎಐಡಿವೈಓ ಜಿಲ್ಲಾ ಅದ್ಯóಕ್ಷರಾದ ಜಗನ್ನಾಥ ಎಸ್.ಎಚ್ ಹೇಳಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಜಿಲ್ಲಾ ಸಮಿತಿಯು ಮಹಿಳಾ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಟನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸುತ್ತಿರುವ ಧರಣಿ ಇಂದಿಗೆ ಒಂದು ತಿಂಗಳು ಪೂರೈಸಿದೆ. ಇಷ್ಟಾದರೂ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಅಲ್ಲದೇ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಿಲ್ಲ. ಕೇಂದ್ರದ ಆಡಳಿತರೂಢ ಬಿಜೆಪಿ ಪಕ್ಷದ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ರ ಪ್ರಭಾವಕ್ಕೆ ಪೊಲೀಸರು ಮಣಿದಿದ್ದಾರೆ ಎನ್ನುವ ಅನುಮಾನಗಳಿವೆ. ವಿಶ್ವ ಚಾಂಪಿಯನ್ಷಿಪ್, ಒಲಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿರುವ ಈ ಕುಸ್ತಿಪಟುಗಳ ದೂರು ಹಾಗೂ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಈ ರೀತಿ ಧರಣಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಅಲ್ಲದೆ ದೂರು ನೀಡಿರುವ ಏಳು ಸಂತ್ರಸ್ತೆಯರಲ್ಲಿ ಒಬ್ಬ ಬಾಲಕಿಯೂ ಇದ್ದಾಳೆ. ಆದ್ದರಿಂದ ಈ ಪ್ರಕರಣ ಪೋಕ್ಸೋ ಕಾಯ್ದೆ ಅಡಿಯಲ್ಲಿಯೂ ಬರುತ್ತದೆ. ಇಷ್ಟಾದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದನ್ನು ಗುರುತಿಸಿ ಸುಪ್ರೀಂ ಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಹಿಂದೆ ಈ ಪ್ರಕರಣದ ತನಿಖೆ ನಡೆಸಿದ ಮೇರಿಕೋಂ ಸಮಿತಿಯ ವರದಿಯನ್ನು ಕ್ರೀಡಾ ಇಲಾಖೆ ಬಹಿರಂಗಪಡಿಸಿಲ್ಲ. ಇದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆರೋಪಿಗಳು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ. ಅಲ್ಲದೇ ಸಾಕ್ಷ ನಾಶಗೊಳಿಸಲು ಯತ್ನಿಸಿದ್ದಾರೆ ಮತ್ತು ದೂರು ಹಿಂಪಡೆಯಲು ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಧರಣಿನಿರತ ಕುಸ್ತಿಪಟುಗಳು ದೂರಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಕುಸ್ತಿಪಟುಗಳ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಘೋಷಣೆ ನೀಡಿರುವ ಸರ್ಕಾರವು ಕ್ರೀಡೆಯಲ್ಲಿ ಹೆಣ್ಣು ಮಕ್ಕಳ ಸಾಧನೆಗೆ ಪೂರಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸಿ ಕೊಡುವುದು ತನ್ನ ಆದ್ಯ ಕರ್ತವ್ಯ ಎಂದು ಭಾವಿಸಬೇಕು. ಆದರೆ ಖ್ಯಾತನಾಮ ಕುಸ್ತಿಪಟುಗಳು ಎರಡು ಬಾರಿ ರಸ್ತೆಗಳಿದು ಧರಣಿ ನಡೆಸಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಆಳುವವರ ಈ ಧೊರಣೆಯು ಮಹಿಳೆಯರ ಬಗ್ಗೆ ತಮಗಿರುವ ತತ್ಸಾರದ ಭಾವನೆಯನ್ನು ತೋರುತ್ತದೆ ಮತ್ತು ದುಷ್ಟ ಶಕ್ತಿಗಳಿಗೆ ಮತ್ತಷ್ಟು ಬಲ ತುಂಬುತ್ತದೆ. ಇದರಿಂದಾಗಿ ಕ್ರೀಡಾರಂಗದಲ್ಲಿ ಹೆಣ್ಣು ಮಕ್ಕಳ ಸಾಧನೆ ಹಿಂದೆ ಬೀಳುತ್ತದೆ. ಇಂತಹ ಅನ್ಯಾಯದ ವಿರುದ್ಧ ಧರಣಿ ನಡೆಸುತ್ತಿರುವ ಕುಸ್ತಿಪಟುಗಳ ಜೊತೆಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ಒತ್ತಾಸೆಯಾಗಿ ನಿಲ್ಲುತ್ತದೆ. ಎಐಡಿವೈಓ ರಾಜ್ಯ ಸಮಿತಿಯ ಕರೆಯ ಮೇರೆಗೆ ಇಂದು ರಾಜ್ಯಾದಾದ್ಯಂತ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಿ ಕಲಬುರಗಿಯ ಕ್ರಿಡಾಪಟುಗಳು ಹಾಗೂ ಕ್ರಿಡಾ ಪ್ರೇಮಿಗಳು ಪೋಸ್ಟರ್ ಹಿಡಿದು ಬೆಂಬಲ ಸೂಚಿಸಿದ್ದು, ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಹಾಗೂ ಹೆಣ್ಣು ಮಕ್ಕಳು ಧೈರ್ಯದಿಂದ ಕ್ರೀಡಾ ಸಾಧನೆ ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಎಐಡಿವೈಓ ಸಂಘಟನೆಯ ಜಿಲ್ಲಾ ಉಪಾದ್ಯಕ್ಷರಾದ ಸಿದ್ದು ಚೌಧರಿ, ಮುಖಂಡರಾದ ಪುಟ್ಟರಾಜ ಲಿಂಗಶೆಟ್ಟಿ ಗೌತಮ್ ಪರತೂರಕರ್, ದತ್ತು ಹುಡೇಕರ್ ,ನಾಗೇಶ್ ಪವಾರ್, ರಮೇಶ ದೇವಕರ್ ಇನ್ನಿತರರು ಚಳವಳಿಯಲ್ಲಿ ಭಾಗವಹಿಸಿದ್ದರು.