
ಅಥಣಿ :ಎ.5: ಭಗವಾನ್ ಮಹಾವೀರ ತೀಥರ್ಂಕರರು ಬೋಧಿಸಿದ ಅಹಿಂಸಾ ಪರಮೋಧರ್ಮ ತತ್ವವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಬೆಳೆಯುತ್ತದೆ’ ಎಂದು ಜೈನ ಸಮಾಜದ ಮುಖಂಡರಾದ ನ್ಯಾಯವಾದಿ ಕೆ ಎ ವನಜೋಳ ಅವರು ಹೇಳಿದರು
ಅವರು ತಾಲೂಕಾಡಳಿತ ಹಾಗೂ ಜೈನ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾವೀರ ತೀಥರ್ಂಕರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ, ಸುಮಂಗಲೆಯರು ಕುಂಭ ಹೊತ್ತ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು, ಅವರು ಮುಂದೆ ಮಾತನಾಡುತ್ತಾ ಭಗವಾನ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆ ಬಯಸಿ ತ್ಯಾಗ, ತಪಸ್ಸು ಮಾಡಿದವರು. ಈ ಆಧುನೀಕತೆಯಲ್ಲಿ ನಾವೆಲ್ಲ ಮಹಾವೀರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು
ಈ ವೇಳೆ ಉಪ ತಹಶೀಲ್ದಾರ ಮಹಾದೇವ ಬಿರಾದಾರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಭಗವಾನ್ ಮಹಾವೀರರು ಬೋಧಿಸಿದ ಅಹಿಂಸಾ ತತ್ವ ನಮ್ಮ ಜೀವನಕ್ಕೆ ದಾರಿದೀಪವಾಗಿದೆ ಭಗವಾನ್ ಮಹಾವೀರರು ಬೋಧಿಸಿದ ತತ್ವ ಸಿದ್ಧಾಂತಗಳು ಎಲ್ಲ ಸಮಾಜಕ್ಕೆ ಅನ್ವಯಿಸುತ್ತದೆ. ಎಂದು ಹೇಳಿದ ಅವರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ನೀತಿ ಸಂಹಿತೆ ಜಾರಿ ಇರುವುದರಿಂದ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆನಂತರ ಜೈನ ಸಮಾಜದ ಅಧ್ಯಕ್ಷ ಚಂದ್ರಕಾಂತ ಘೋoಗಡಿ, ಭಾರತೀಯ ಜೈನ ಸಂಘಟನೆಯ ತಾಲೂಕ ಅಧ್ಯಕ್ಷ ಡಿ ಡಿ ಮೇಕನಮರಡಿ ಮಾತನಾಡಿ ಭಗವಾನ್ ಮಹಾವೀರರು ಬೋಧಿಸಿದ ತತ್ವಗಳು ಜೈನ ಧರ್ಮಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ಅವರ ತತ್ವಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಪಾಲಿಸಿದಾಗ ಬದುಕು ಸುಂದರವಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷರಾದ ಚಂದ್ರಕಾಂತ ಗೊಂಗಡಿ, ಸಾಹಿತಿ ಬಾಳಾಸಾಹೇಬ ಲೋಕಾಪುರ, ಡಿ ಡಿ ಮೇಕನಮರಡಿ, ನ್ಯಾಯವಾದಿ ಎಲ್ ಡಿ ಹಳಿಂಗಳಿ, ಗುಂಡು ಇಜಾರೆ, ನಿತೀನ್ ಗೊಂಗಡಿ, ಶೀತಲ ಪಡನಾಡ, ಸಂತೋಷ ಬೊಮ್ಮಣ್ಣವರ, ವಾಣಿಶ್ರೀ ದಾನಗೌಡರ, ಭರತೇಶ ಕಾಸರ, ಪ್ರಫುಲ್ಲ ಪಡನಾಡ, ಸೇರಿದಂತೆ ಜೈನ ಸಮಾಜದ ಸಮಸ್ತ ಶ್ರಾವಕ / ಶ್ರಾವಕಿಯರು ಭಾಗವಹಿಸಿದ್ದರು,
ನೂರಾರು ಶ್ರಾವಕ ಶ್ರಾವಕಿಯರು ಭಗವಾನ್ ಮಹಾವೀರರ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರ ಪೇಠ ಜೈನ ಬಸದಿಯಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತೆ ಜೈನ ಬಸದಿಯಲ್ಲಿ ಸಮಾರೋಪಗೊಂಡಿತು.