ಮಳೆ ನಿರ್ವಹಣೆ, ಡಿಸಿಎಂ, ಸಭೆ

ನಗರದಲ್ಲಿ ಮಳೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ನಗರದ ಎಲ್ಲಾ ಶಾಸಕರು ಸಂಸದರೊಂದಿಗೆ ವಿಧಾನಸೌಧದಲ್ಲಿಂದು ಸಭೆ ನಡೆಸಿದರು. ಸಚಿವರಾದ ಕೃಷ್ಣ ಭೈರೇಗೌಡ, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಭಾಗವಹಿಸಿದ್ದರು.

ಬೆಂಗಳೂರು, ಜೂ. ೫- ಬೆಂಗಳೂರಿನ ಅಭಿವೃದ್ಧಿ, ಮಳೆ ನಿರ್ವಹಣೆ, ಮಳೆಯಾದಾಗ ಆಗುವ ಅನಾಹುತಗಳ ತಡೆ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಶಾಸಕರು, ಸಂಸದರ ಜತೆ ಸಭೆ ನಡೆಸಿದರು.
ವಿಧಾನಸೌಧದಲ್ಲಿಂದು ನಡೆದ ಈ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ವಿಧಾನಸಭಾ ಸದಸ್ಯರುಗಳ ಹಾಗೂ ವಿಧಾನಪರಿಷತ್ ಸದಸ್ಯರುಗಳು, ಸಂಸದರುಗಳು ಭಾಗಿಯಾಗಿದ್ದರು.ಸಭೆಯ ಆರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿ ಸಚಿವರಾಗಿ ಸಮಗ್ರ ಬೆಂಗಳೂರಿನ ಅಭಿವೃದ್ಧಿಗೆ ಒತ್ತು ನೀಡುವ ತೀರ್ಮಾನ ಮಾಡಿದ್ದೇನೆ. ಹಾಗೆಯೇ ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಗಮನಹರಿಸುವ ಜರೂರಿದ್ದು, ಈ ಬಗ್ಗೆ ಸಲಹೆ ಪಡೆಯಲು ಎಲ್ಲ ಶಾಸಕರನ್ನು ಸಭೆಗೆ ಕರೆದಿದ್ದೇನೆ. ಬೆಂಗಳೂರಿನ ಸಮಗ್ರ ಅಭಿವದ್ಧಿಗೆ ಸಂಬಂಧಿದಂತೆ ಎಲ್ಲರೂ ಸಲಹೆ ನೀಡಿ, ಪಕ್ಷಾತೀತವಾಗಿ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಮಳೆ ಬಂದಾಗ ಬೆಂಗಳೂರಿನಲ್ಲಿ ಸಮಸ್ಯೆಗಳು, ಅನಾಹುತಗಳಾಗಿದ್ದು, ಇದನ್ನು ತಡೆಯಲು ಏನು ಮಾಡಬೇಕು ಎಂಬ ಬಗ್ಗೆಯೂ ಸಲಹೆ ನೀಡುವಂತೆ ಅವರು ಸಭೆಯಲ್ಲಿದ್ದ ಶಾಸಕರನ್ನು ಕೋರಿದರು.ಇದಾದ ನಂತರ ಎಲ್ಲ ಶಾಸಕರುಗಳು ಬೆಂಗಳೂರಿನ ಅಭಿವೃದ್ಧಿ ಹಾಗೂ ಮಳೆ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮದೆ ಆದ ಸಲಹೆಗಳನ್ನು ಸಭೆಯ ಮುಂದಿಟ್ಟರು.
ಈ ಸಭೆಯಲ್ಲಿ ಸಚಿವರುಗಳಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಜಮೀರ್ ಅಹಮದ್, ಸಂಸದರಾದ ಡಿ.ಕೆ. ಸುರೇಶ್, ತೇಜಸ್ವಿಸೂರ್ಯ, ಪ್ರತಾಪ್‌ಸಿಂಹ್, ಕೆ.ಸಿ. ಚಂದ್ರಶೇಖರ್, ಶಾಸಕರುಗಳಾದ ರಿಜ್ವಾನ್ ಹರ್ಷದ್, ಎ.ಸಿ. ಶ್ರೀನಿವಾಸ್, ಎಂ. ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ಶರವಣ, ಗೋಪಾಲಯ್ಯ, ಉದಯ ಗರುಡಾಚಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಜೀರ್ ಅಹಮದ್ ಮತ್ತಿತರರು ಪಾಲ್ಗೊಂಡಿದ್ದರು.