ಮನೆ ಕಳವು: 25 ಗ್ರಾಂ.ಚಿನ್ನ, 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ

ಕಲಬುರಗಿ,ಜೂ.6-ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ಬಂಧಿಸಿ 25 ಗ್ರಾಂ.ಬಂಗಾರದ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.
ಮನೆ ಬೀಗ ಮುರಿದು 10 ಗ್ರಾಂ.ಬಂಗಾರದ ಆಭರಣ ಮತ್ತು 17 ಸಾವಿರ ರೂ.ನಗದು ಕಳವು ಮಾಡಲಾಗಿದೆ ಎಂದು ನಗರದ ಎಂ.ಎಸ್.ಕೆ.ಮಿಲ್ ಬಡಾವಣೆಯ ಇಕ್ಬಾಲ್ ಕಾಲೋನಿಯ ಮೊಹ್ಮದ್ ಜುಲ್ಪೇಖಾರೋದ್ದಿನ್ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ, ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಕುಬೇರ ಎಸ್.ರಾಯಮಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿಕ್ರೇಶ್ವರ, ಉಮೇಶ, ಮುಜಾಹಿದ್ ತೊತ್ವಾಲ್, ಶರಣಬಸವ, ಉಮೇಶ, ಆತ್ಮಕುಮಾರ ಅವರು ತನಿಖೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಪಟ್ಟ 16 ವರ್ಷದ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಬಾಲಕ ಮೂರು ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ 25 ಗ್ರಾಂ.ಬಂಗಾರದ ಆಭರಣ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.