
ಕಲಬುರಗಿ:ಮಾ.1: ನಮ್ಮ ನಮ್ಮ ಮನೆಗಳಲ್ಲಿರುವ ಸಂಸ್ಕøತಿ ಮತ್ತು ಆಚರಣೆಗಳ ಆಧಾರದ ಮೇಲೆ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುವುದರಿಂದ ಮನೆಯೇ ಸಂಸ್ಕøತಿಯ ನೈಜ ತೊಟ್ಟಿಲು ಎಂದು ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಹಿರಿಯ ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಪ್ರತಿಪಾದಿಸಿದರು.
ಇಲ್ಲಿನ ರಿಂಗ್ರೋಡ್ ಸಮೀಪದ ಮುತ್ತ್ಯಾನ ಬಬಲಾದ ಸಮೀಪದ ಶ್ರೀಗುರು ಲಿಂ.ಚನ್ನವೀರೇಶ್ವರ ವಿರಕ್ತಮಠದಲ್ಲಿ ಸೋಮವಾರ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಇಂದು ಎಲ್ಲೆಡೆ ಸ್ಮಾರ್ಟ್ ಫೋನ್ ಹಾವಳಿ ಆವರಿಸಿಕೊಂಡಿದೆ. ಇದರಿಂದಾಗಿ ಮಕ್ಕಳ ವ್ಯಕ್ತಿತ್ವ ವಿಕಸನದ ಮೇಲೆ ಹೆಚ್ಚಾಗಿ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಬದುಕಿನ ಉದ್ದೇಶ ಮತ್ತು ಸಂಸ್ಕಾರಗಳನ್ನು ಕಲಿಸಿಕೊಟ್ಟರೆ ಅವರು ಬಸವಾದಿ ಶರಣರ ಆಶಯಗಳಿಗೆ ತಕ್ಕಂತೆ ರೂಪುಗೊಳ್ಳುತ್ತಾರೆ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಬಿ.ಎಸ್.ಮಾಲಿಪಾಟೀಲ್ ಅವರು ಮಾತನಾಡುತ್ತಾ, ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬೇಕಾಗುತ್ತದೆ. ಅದೇರೀತಿ, ಮಕ್ಕಳನ್ನು ಬಾಲ್ಯದಲ್ಲಿಯೇ ಸರಿಯಾದ ಹಾದಿಯಲ್ಲಿ ತಿದ್ದುವ ಕೆಲಸವನ್ನು ಮಾಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಶ್ರೀ ಮಠದ ಪೀಠಾಧಿಪತಿ ಪೂಜ್ಯ ಗುರುಪಾದಲಿಂಗ ಮಹಾಶಿವಯೋಗಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದ ಈ ಸಮಾರಂಭವನ್ನು ಸಂಚಾಲಕ ಸಂಗಮನಾಥ ಹೂಗಾರ್ ನಿರೂಪಿಸಿದರು. ಮಾಣಿಕ್ ಮಿರ್ಕಲ್ ಸ್ವಾಗತಿಸಿದರು. ಸಿದ್ದಣ್ಣ ವಾಡಿ, ಹಾಸ್ಯ ಕಲಾವಿದ ರಾಜು ಹೆಬ್ಬಾಳ, ಗಣಪತರಾವ್ ವಕೀಲರು, ಶರಣು ಪಾಟೀಲ್, ಶಿವರಾಜ ಬಾಲಚೇಡ, ಶರಣ ಜೇವರ್ಗಿ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.