ಸಂಜೆವಾಣಿ ವಾರ್ತೆ
ಸಿರಿಗೇರಿ ಏ.4. ಗ್ರಾಮದ ಗ್ರಾಮ ಪಂಚಾಯಿತಿ ಆಡಳಿತ ವತಿಯಿಂದ ಮತದಾರರಲ್ಲಿ ಮತಜಾಗೃತಿ ಮೂಡಿಸಲ ನಿನ್ನೆ ಸಂಜೆ ಗ್ರಮದ ಮುಖ್ಯಬೀದಿಯಲ್ಲಿ ಮೇಣದಬತ್ತಿ ಜಾಥಾ ನಡೆಸಲಾಯಿತು. ಇದೇವೇಳೆ ಪಿಡಿಓ ಶಿವಕುಮಾರಕೋರಿ ತಮ್ಮ ಪ್ರತಿಕ್ರಿಯೆ ನೀಡಿ, ಮಾನ್ಯ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ತಿಂಗಳು ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸಲಾಗುತ್ತಿದೆ. ಮತದಾನ 5ವರ್ಷಕ್ಕೊಮ್ಮೆ ಬರುವ ಮತ್ತು ಜನಸಾಮಾನ್ಯನು ತನ್ನ ಪ್ರಭಾವವನ್ನು ಬೀರುವ ಏಕೈಕ ಪ್ರಕ್ರಿಯೆಯಾಗಿದೆ. ಈ ಕರ್ತವ್ಯದಲ್ಲಿ ಪ್ರತಿಯೊಬ್ಬ ಮತದಾರ ಪಾಲ್ಗೊಂಡು ಮತ ಚಲಾವಣೆ ಮಾಡಬೇಕೆಂದರು. ಸರ್ಕಾರಿ ಮಾಡಲ್ ಶಾಲೆಯ ಮುಖ್ಯಗುರು ಸತೀಶ್ಕುಮಾರ್ ಪ್ರತಿಕ್ರಿಯಿಸಿ ಮೇಲಧಿಕಾರಿಗಳ ಅದೇಶದಂತೆ ಗ್ರಾಮಾಡಳಿತದಿಂದ ನಮಗೆ ಸರ್ಕುಲರ್ ಬಂದ ಹಿನ್ನೆಲೆಯಲ್ಲಿ ಮತಜಾಗೃತಿ ಜಾಥಾ ಪಂಜಿನ ಮೆರವಣಿಗೆ ಅಥವಾ ಮೇಣದಬತ್ತಿ ಮೆರವಣಿಗೆ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ. ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ಪ್ರಜ್ಞೆಯಿಂದ, ಜವಾಬ್ದಾರಿಯಿಂದ, ದೇಶದ ರಾಜ್ಯದ ಕಾಳಜಿ ಇಟ್ಟುಕೊಂಡು ಉತ್ತಮ ಪ್ರಜಾಪ್ರಭುತ್ವಕ್ಕಾಗಿ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು. ಜಾಥಾದಲ್ಲಿ ಅಂಗನವಾಡಿ ಮತ್ತು ಆಶಾಕಾರ್ಯಕರ್ತರು, ಶಾಲಾ ಮುಖ್ಯಗುರುಗಳು, ಶಿಕ್ಷಕರು, ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿ ಮಹಿಳೆಯರು, ಪಂಚಾಯಿತಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.