
ಬೆಂಗಳೂರು, ಮೇ. ೧- ಈಗಾಗಲೇ ಕ್ಷೇತ್ರದ ತುಂಬೆಲ್ಲ ಬಿರುಸಿನ ಪ್ರಚಾರ ಕೈಗೊಂಡಿರುವ ಜಯನಗರ ಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಕ್ಷೇತ್ರದ ಹಲವೆಡೆಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
ಇಂದು ಭೈರಸಂದ್ರ, ಸಾರಕ್ಕಿ, ಶಾಕಾಂಬರಿನಗರ, ಜಯನಗರ ಕ್ಷೇತ್ರದ ಸುತ್ತಮುತ್ತ ಸಾವಿರಾರು ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಿದರು.
ಕ್ಷೇತ್ರದಲ್ಲಿ ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕೋವಿಡ್ ವೇಳೆ ಮಾಡಿರುವ ಜನಸೇವೆಗಳನ್ನು ಜನರಿಗೆ ನೆನಪಿಸುತ್ತಾ ಮತ್ತೊಮ್ಮೆ ಆಶೀರ್ವದಿಸಲು ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಜತೆಗೂಡಿ ಸಾರಕ್ಕಿ ಮತ್ತು ಶಾಕಾಂಬರಿ ನಗರ ವಾರ್ಡ್ ಸುತ್ತಮುತ್ತ ಪ್ರಚಾರ ನಡೆಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದರು.
ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜಯನಗರ ಇಡೀ ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸಬೇಕು ಎಂದು ಕನಸು ಕಂಡಿದ್ದು, ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿ ಎಂದು ಕ್ಷೇತ್ರದ ಮತದಾರರಲ್ಲಿ ವಿನಂತಿಸಿದರು. ಗುರಪ್ಪನಪಾಳ್ಯ, ಭೈರಸಂದ್ರದಲ್ಲಿ ಕೂಡ ಮನೆ ಮನೆ ಪ್ರಚಾರ ನಡೆಸಿ, ತಮ್ಮ ಸಾಧನೆ ಕರಪತ್ರಗಳನ್ನು ಹಂಚಿದರು. ಪೌರಕಾರ್ಮಿಕರಿಗೆ ಮತ ನೀಡಲು ಮನವಿ ಮಾಡಿದರು.
ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ೪೦ ಪರ್ಸೆಂಟ್ ಕಮೀಷನ್ ಸರ್ಕಾರವಿದ್ದು, ಅದನ್ನು ಕಿತ್ತೊಗೆಯಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಬಡವರ ಪರ ಅನೇಕ ಯೋಜನೆಗಳನ್ನು ರೂಪಿಸಿತ್ತು. ಬಿಜೆಪಿ ಸರ್ಕಾರದಿಂದ ಹಲವು ಬಡವರ ಪರ ಯೋಜನೆಗಳು ಬಂದ್ ಆದವು. ಈ ಸರ್ಕಾರಕ್ಕೆ ಬಡವರು ಬುದ್ಧಿ ಕಲಿಸಲಿದ್ದಾರೆ ಎಂದರು.
ಮಾಜಿ ಪಾಲಿಕೆ ಸದಸ್ಯ ಎನ್.ನಾಗರಾಜು ಮತ್ತಿತರರು ಭಾಗವಹಿಸಿದ್ದರು.
ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿರವರು ಭೈರಸಂದ್ರ, ಶಾಕಾಂಬರಿ ನಗರ, ಜಯನಗರ ಸುತ್ತಮುತ್ತ ಪ್ರದೇಶಗಳಲ್ಲಿ ಪಾದಯತ್ರೆ ನಡೆಸಿ ಮತಯಾಚನೆ ಮಾಡಿದರು. ಮಾಜಿ ಪಾಲಿಕೆ ಸದಸ್ಯ ಎನ್.ನಾಗರಾಜು, ಮತ್ತಿತರ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.