ದೇವದುರ್ಗ,ಏ.೧೭- ದೇಶದಲ್ಲಿ ೧೮ವರ್ಷ ತುಂಬಿದ ಸರ್ವ ಪ್ರಜೆಗಳಿಗೂ ಸಂವಿಧಾನ ಮತದಾನ ಮಾಡುವ ಹಕ್ಕು ನೀಡಿದ್ದು, ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕ ಸಂವಿಧಾನ ನೀಡಿರುವ ಪವಿತ್ರವಾದ ಹಕ್ಕನ್ನು ಚೆಲಾಯಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನ ಹಾಗೂ ಪ್ರತಿಜ್ಞಾವಿಧಿ ಬೋಧನೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪ್ರತಿವರ್ಷ ವಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತಿದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂಥ ವ್ಯಕ್ತಿ ಆಯ್ಕೆ ಮಾಡುವುದೇ ಚುನಾವಣೆ ಪ್ರಕ್ರಿಯೆಯಾಗಿದೆ. ಮತದಾನವೇಳೆ ಜನರು ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೆ ಉತ್ತಮ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳಿದರು.
ನಂತರ ಇಲಾಖೆ ನೌಕರರಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ನೌಕರರು ಪಟ್ಟಣದ ವಿವಿಧ ಬಡಾವಣೆಯಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು. ವೈದ್ಯಾಧಿಕಾರಿಗಳಾದ ಡಾ.ಶಿವಾನಂದ, ಡಾ.ಕೆ.ಅಯ್ಯಣ್ಣ, ಡಾ.ಎಂ.ಡಿ.ಹಸನ್, ಡಾ.ಅರುಣಾ, ಡಾ.ಶಂಶುದ್ದೀನ್, ಡಾ.ಅಖಿಲೇಶ್, ಡಾ.ಎಂ.ಎಸ್.ಹೊಸಮನಿ, ಡಾ.ನಿರ್ಮಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಹಿರೇಮಠ, ಓಂಕಾರ, ಶಿವಪ್ಪ ಇತರರಿದ್ದರು.