ಮತದಾನ ಸಂವಿಧಾನ ಕಲ್ಪಿಸಿರುವ ಹಕ್ಕು : ಅರ್ಹ ಮತದಾರರು ಮತದಾನ ಮಾಡುವಂತೆ ಕರೆ

ವಿಜಯಪುರ: ಎ.12:ಪ್ರತಿ ಪ್ರಜೆಯು ಮತದಾನ ಮಾಡುವುದು ಸಂವಿಧಾನ ಕಲ್ಪಿಸಿಕೊಟ್ಟಿರುವ ಹಕ್ಕು. ಬರುವ ಮೇ-10ರ ಮತದಾನ ದಿನದಂದು ಎಲ್ಲರೂ ಪಾಲ್ಗೊಂಡು ಮತದಾನ ಮಾಡಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ ಕುಂಬಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಮಹಾ ನಗರಪಾಲಿಕೆ ಸಹಯೋಗದಲ್ಲಿ ಸ್ವೀಪ್ ಕಾರ್ಯಕ್ರಮದಡಿ ಮಂಗಳವಾರ ನಗರದ ಶಂಕರಲಿಂಗ ದೇವಸ್ಥಾನ ಜೋರಾಪುರ ಪೇಠದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರಿಗಾಗಿ ಆಯೋಜಿಸಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮತದಾನದಿಂದ ಯಾರೂ ವಂಚಿತರಾಗಬಾರದು. ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ತಮ್ಮ ಹಕ್ಕು ಚಲಾಯಿಸಬೇಕು. ಕುಟುಂಬದ ಸದಸ್ಯರೆಲ್ಲರೂ ಮತದಾನ ಮಾಡುವುದರೊಂದಿಗೆ ನೆರೆಹೊರೆಯವರಿಗೆ ಮತದಾನದ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟು, ಮತದಾನ ಮಾಡಲು ಪ್ರೇರಣೆ ನೀಡಬೇಕು ತಿಳಿಸಿದರು.
ಮಹಾನಗರ ಪಾಲಿಕೆ ವಿಜಯಪುರ ಉಪಆಯುಕ್ತರಾದ ಮಹಾವೀರ ಬೋರಣ್ಣ ಅವರು ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಹಾಗೂ ಕುಟುಂಬದ ಎಲ್ಲ ಸದಸ್ಯರು ಮತದಾನ ಮಾಡಲೇಬೇಕು. ಸ್ವಸಹಾಯ ಸಂಘದÀ ಎಲ್ಲ ಮಹಿಳೆಯರು ಮತದಾರರಿಗೆ ಮತ ಚಲಾಯಿಸಲು ಪ್ರೇರೆಪಿಸಬೇಕೆಂದು ಹೇಳಿದರು.
ಜಿಲ್ಲಾಕೌಶಲ್ಯ ಮಿಷನ್ನಿನ ಅಭಿಯಾನ ವ್ಯವಸ್ಥಾಪಕರಾದ ಶ್ರೀಮತಿ ಸುನಂದಾ ಜಿ. ಬಾಲಪನ್ನವರ ಮಾತನಾಡಿ, ನಮ್ಮ ದೇಶದ 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳಿಗೂ ಮತದಾನ ಮಾಡುವ ಮತಾಧಿಕಾರವಿದೆ. ಎಲ್ಲ ಮಹಿಳೆಯರು ಮತದಾನ ಮಾಡುವುದರೊಂದಿಗೆ ಮತದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕೂ ಮೊದಲು ಮತದಾನ ಜಾಗೃತಿ ಹಾಗೂ ಜಾಥಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಆಯುಕ್ತರಾದ ಎಸ್.ಎ ಮಹಾಜನ, ವಲಯ ಆಯುಕ್ತರಾದ ದೇವಿಂದ್ರ ಧನಪಾಲ, ಕಂದಾಯ ಅಧಿಕಾರಿಗಳಾದ ಕೆ. ಎ. ಲೈನ್, ಮಲ್ಲನಗೌಡ ಬಿರಾದಾರ, ರವೀಂದ್ರ ಶಿರಶ್ಯಾಡ ಸಮುದಾಯ ಸಂಘಟಿಕರಾದ ಶ್ರೀಮತಿ ಸಾವಿತ್ರಿ ತಿಪ್ಪಣ್ಣವರ, ಶ್ರೀಮತಿ ಭಾರತಿ ಕವಲಗಿ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಶ್ವೇತಾ, ಮನೀಷಾ, ಮಮತಾ ಉಪಸ್ಥಿರಿದ್ದರು.