ಬ್ಯಾಡಗಿ,ಏ30: ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚುನಾವಣೆಯಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸಲು ಮತದಾನ ಪ್ರಚಾರಗಳು ಮುಖ್ಯವಾಗಿದೆ ಎಂದು ಗ್ರಾಪಂ ಅಭಿವೃಧ್ದಿ ಅಧಿಕಾರಿ ಗೌಸಮೋಹಿದ್ದೀನ್ ತಹಶೀಲ್ದಾರ ಹೇಳಿದರು.
ತಾಲೂಕಿನ ಘಾಳಪೂಜಿ ಗ್ರಾಮ ಪಂಚಾಯತ ವ್ಯಾಪ್ತಿಯ ದುಮ್ಮಿಹಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಸ್ಥಳದಲ್ಲಿ ತಾಲೂಕಾ ಸ್ವೀಪ್ ಸಮೀತಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನವು ಮೂಲಭೂತ ಹಕ್ಕುಗಳ ಜೊತೆಗೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ ಎಂದು ತಿಳಿಸಿದರು.
ತಾಲೂಕಾ ನರೇಗಾ ಯೋಜನೆಯ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ಪ್ರತಿಯೊಬ್ಬರೂ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ನಾಗರೀಕ ಕರ್ತವ್ಯವನ್ನು ಚಲಾಯಿಸಲು ಮತ್ತು ಸಮಾಜದ ಸಕ್ರಿಯ ಸದಸ್ಯರಾಗಲು ಮತದಾನವು ಒಂದು ಪ್ರಮುಖ ಮಾರ್ಗವಾಗಿದೆ ಎಂದು ತಿಳಿಸಿದರಲ್ಲದೇ, ಎಲ್ಲಾ ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಸತೀಶ ಅರಳಿಕಟ್ಟಿ, ಗ್ರಾಮ ಕಾಯಕ ಮಿತ್ರ ರೇಣುಕಾ ಲಂಕೇರ, ಶಾಂತೇಶ ಜಾಡರ, ವಿರೂಪಾಕ್ಷ ಬ್ಯಾಡಗಿ, ರಾಜು ಆಲದಳ್ಳಿ, ಗ್ರಾಪಂ ಹಾಗೂ ನರೇಗಾ ಸಿಬ್ಬಂದಿಗಳು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.